ADVERTISEMENT

ರೈತರ ನೆರವಿಗೆ ಬರಲು ಒತ್ತಾಯ

ಮಹಿಳಾ ಸ್ವಸಹಾಯ ಸಂಘಗಳ ಸಾಲ ವಸೂಲಾತಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 16:37 IST
Last Updated 5 ಜೂನ್ 2020, 16:37 IST
ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯೊಬ್ಬರು ತನ್ನ ಮಗುವಿಗೆ ಹಾಲು ಕುಡಿಸುತ್ತಾ ಮಹಿಳಾ ಸ್ವಸಹಾಯ ಸಂಘಗಳ ಸಾಲ ವಸೂಲಾತಿಗೆ ತಡೆ ಹಾಕಬೇಕು ಎಂಬ ಫಲಕ ಹಿಡಿದು ಕುಳಿತ ದೃಶ್ಯ ಕಂಡು ಬಂತು
ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯೊಬ್ಬರು ತನ್ನ ಮಗುವಿಗೆ ಹಾಲು ಕುಡಿಸುತ್ತಾ ಮಹಿಳಾ ಸ್ವಸಹಾಯ ಸಂಘಗಳ ಸಾಲ ವಸೂಲಾತಿಗೆ ತಡೆ ಹಾಕಬೇಕು ಎಂಬ ಫಲಕ ಹಿಡಿದು ಕುಳಿತ ದೃಶ್ಯ ಕಂಡು ಬಂತು   

ಮೈಸೂರು: ರೈತರು ಹಾಗೂ ರೈತ ಮಹಿಳೆಯರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೇರಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಹಿಳಾ ಸ್ವಸ್ವಹಾಯ ಸಂಘಗಳು ಖಾಸಗಿ ಫೈನಾನ್ಸ್‌ಗಳಿಂದ, ಸಂಸ್ಥೆಗಳಿಂದ ಸಾಲ ಪಡೆದುಕೊಂಡಿವೆ. ಕೊರೊನಾ ಸಂಕಷ್ಟದಿಂದಾಗಿ ಈ ಸಂಘಗಳ ಸದಸ್ಯರು ತಾವು ಪಡೆದ ಸಾಲ ಮರುಪಾವತಿಸುವುದು ಕಷ್ಟವಾಗಿದೆ. ಸಾಲ ನೀಡಿದ ಸಂಸ್ಥೆಗಳು ಬಡ್ಡಿ ಹಾಗೂ ಅಸಲು ಪಾವತಿಸುವಂತೆ ದುಂಬಾಲು ಬಿದ್ದಿವೆ. ಈ ಒತ್ತಡದಿಂದ ಸ್ವಸಹಾಯ ಸಂಘಗಳು ವಿನಾಶದ ಅಂಚಿಗೆ ತಲುಪಿವೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಇಂತಹ ಒತ್ತಡಕ್ಕೆ ತಡೆ ಹಾಕಬೇಕು. ಸಾಲ ವಸೂಲಾತಿ ಎಂಬ ನೀತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಇಲಾಖೆಯ ಖಾಸಗೀಕರಣ ಮಾಡಬಾರದು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸರಿಯಲ್ಲ ಎಂದು ಖಂಡಿಸಿದ ಅವರು, ಇದರಿಂದ ಬಂಡವಾಳಷಾಹಿಗಳಿಗಷ್ಟೇ ಲಾಭವಾಗುತ್ತದೆ. ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿದರು.

ರೈತರ ಹಳೆ ಸಾಲಗಳನ್ನು ಮನ್ನಾ ಮಾಡಿ, ಹೊಸ ಸಾಲಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡರಾದ ಅತ್ತಹಳ್ಳಿ ದೇವರಾಜ್ ಸೇರಿದಂತೆ ಹಲವರು ಇದ್ದರು.

ಅಮೆರಿಕದಲ್ಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮೈಸೂರು: ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿ ಅಮೆರಿಕದಲ್ಲಿ ಕಪ್ಪು ವರ್ಣೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದರು.

ಅಮೆರಿಕ ಸರ್ಕಾರವು ಕೂಡಲೇ ಅಲ್ಲಿನ ಕಪ್ಪುವರ್ಣೀಯರ ಹಕ್ಕುಗಳ ರಕ್ಷಣೆಗೆ ಧಾವಿಸಬೇಕು, ಅವರಿಗೆ ರಕ್ಷಣೆಗೆ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರ ಮೇಲೆ ಕೈಗೊಳ್ಳುತ್ತಿರುವ ನಿರ್ದಾಕ್ಷಿಣ್ಯ ಕ್ರಮಗಳು ಸರಿಯಲ್ಲ. ವರ್ಣಬೇಧ ನೀತಿಯನ್ನು ತೊಡೆದು ಹಾಕಬೇಕು ಎಂದು ಒತ್ತಾಯಿಸಿದರು. ಹೋರಾಟಗಾರರಾದ ಬಸವರಾಜು, ಪುನೀತ್, ಬಾಬೂರಾಜ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.