ADVERTISEMENT

ಕನ್ನಡ ಸಾಹಿತ್ಯ ಅಧ್ಯಯನ ಕಡ್ಡಾಯವಾಗಲಿ

ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಶಿವಕುಮಾರ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 8:10 IST
Last Updated 25 ಅಕ್ಟೋಬರ್ 2020, 8:10 IST
ಕಾರ್ಯಕ್ರಮದಲ್ಲಿ ‘ಸಮಗ್ರ ಕನ್ನಡ ವ್ಯಾಕರಣ’ ಪುಸ್ತಕ ಬಿಡುಗಡೆ ಮಾಡಲಾಯಿತು. ಡಾ.ಶಿವಕುಮಾರ್, ಡಾ.ಮಹದೇವಿಬಾಯಿ, ವೈ.ಎನ್.ಶಂಕರೇಗೌಡ, ಜೈನಹಳ್ಳಿ ಸತ್ಯನಾರಾಯಣಗೌಡ, ಎಚ್.ಬಾಲಕೃಷ್ಣ ಇದ್ದಾರೆ
ಕಾರ್ಯಕ್ರಮದಲ್ಲಿ ‘ಸಮಗ್ರ ಕನ್ನಡ ವ್ಯಾಕರಣ’ ಪುಸ್ತಕ ಬಿಡುಗಡೆ ಮಾಡಲಾಯಿತು. ಡಾ.ಶಿವಕುಮಾರ್, ಡಾ.ಮಹದೇವಿಬಾಯಿ, ವೈ.ಎನ್.ಶಂಕರೇಗೌಡ, ಜೈನಹಳ್ಳಿ ಸತ್ಯನಾರಾಯಣಗೌಡ, ಎಚ್.ಬಾಲಕೃಷ್ಣ ಇದ್ದಾರೆ   

ಮೈಸೂರು: ‘ಎಲ್ಲಾ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ನಿಯಮವನ್ನು ಸರ್ಕಾರ ರೂಪಿಸಿದರೆ ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಅನುಕೂಲವಾಗಲಿದೆ’ ಎಂದು ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್ ಅಭಿಪ್ರಾಯಪಟ್ಟರು.

ಜ್ಞಾನಬುತ್ತಿ ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ.ಎಸ್. ನಾಗಾಚಾರಿ ಅವರ ‘ಸಮಗ್ರ ಕನ್ನಡ ವ್ಯಾಕರಣ’ ಪುಸ್ತಕ ಬಿಡುಗಡೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

1,200 ವರ್ಷಗಳ ಹಿಂದೆ ಕೇಶಿರಾಜನು ಕನ್ನಡ ವ್ಯಾಕರಣ ಮತ್ತು ಭಾಷಾ ಪ್ರಯೋಗ ಹೀಗೆ ಇರಬೇಕು ಎಂದು ಹೇಳಿದ್ದ. ಆದರೆ ಇಂದು ನಾವು ದಿನನಿತ್ಯ ಬಳಸುವ ಭಾಷೆಯಲ್ಲಿ ವ್ಯಾಕರಣವೇ ಇಲ್ಲ. ವ್ಯಾಕರಣ ಎಂಬುದು ಶಾಸ್ತ್ರಕ್ಕಷ್ಟೆ ಎಂಬಂತಾಗಿದೆ. ಹೀಗಿದ್ದರೂ ಕನ್ನಡ ಸಾಹಿತ್ಯ ಮತ್ತು ಭಾಷೆ ಬೆಳವಣಿಗೆ ಹೊಂದುತ್ತಿರುವುದು ನೆಮ್ಮದಿಯ ವಿಚಾರ ಎಂದರು.

ADVERTISEMENT

ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಗಳಿಸಲು ಕನ್ನಡ ಸಾಹಿತ್ಯ ಓದುವಂತಾಗಿದೆ. ಈ ಸ್ಥಿತಿ ಹೀಗೆಯೇ ಮುಂದುವರೆದರೆ ಕನ್ನಡಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಹಾಗಾಗಿ ವೃತ್ತಿಪರ ಕೋರ್ಸ್ ಸೇರಿದಂತೆ ಇತರೆ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯವನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.

ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತೆ ಡಾ.ಮಹದೇವಿಬಾಯಿ ಮಾತನಾಡಿ, ಯಾವುದೇ ಒಂದು ಪುಸ್ತಕದ ಮಹತ್ವ ತಿಳಿಯುವುದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ. ಹಾಗಾಗಿ ವ್ಯಾಕರಣ ಪುಸ್ತಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಸಹಕಾರಿಯಾಗಿದೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ವೈ.ಎನ್.ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.