ಪಿರಿಯಾಪಟ್ಟಣ: ಕಾರ್ಗಿಲ್ ದಿವಸ್ ದೇಶ ಪ್ರೇಮ ಸಾರುವ, ದೇಶದ ಹೆಮ್ಮೆಯ ಸಂಕೇತದ ದಿನವಾಗಿದೆ ಎಂದು ತಾಲ್ಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನರಸಿಂಹೇಗೌಡ ತಿಳಿಸಿದರು.
ತಾಲ್ಲೂಕಿನ ಕುಂದನಹಳ್ಳಿ ಕೊರ್ಗ್ ವಾಟರ್ ಪಾರ್ಕ್ನಲ್ಲಿ ನಿರ್ಮಿಸಿರುವ ಕಾರ್ಗಿಲ್ ವಿಜಯ ದಿವಸ್ ಸ್ಮಾರಕದ ಮುಂದೆ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಶನಿವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ್ ಸಂಭ್ರಮಾಚರಣೆ ಮತ್ತು ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶದ ಸೈನಿಕರು ಪಾಕಿಸ್ತಾನದ ವಿರುದ್ಧ ಶೌರ್ಯವನ್ನು ಮೆರೆದ ಈ ದಿನ ಮುಂದಿನ ಪೀಳಿಗೆಗೆ ಪ್ರೇರಣೆಯ ದಿನವಾಗಿದೆ. ನಮ್ಮ ದೇಶದ ಸೈನಿಕರು ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ಹಗಲಿರುಳು ದೇಶಕ್ಕಾಗಿ ದುಡಿಯುತ್ತಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ 527ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು, ಒಂದು ಸಾವಿರಕ್ಕೂ ಹೆಚ್ಚು ಸೈನಿಕರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರು. ಅವರ ತ್ಯಾಗ ಬಲಿದಾನ ಸ್ಮರಿಸುತ್ತಾ ಇಂದಿನ ಯುವ ಪೀಳಿಗೆಗೆ ತಲುಪಿಸಲು ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸುತ್ತೇವೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಮ್ಮ ಸೈನಿಕರು ನಡೆಸಿದ ಹೋರಾಟ ರೋಚಕವಾದುದು. ಈ ವಿಜಯೋತ್ಸವ ದೇಶದ ಪ್ರತಿಯೊಬ್ಬ ಭಾರತೀಯನಿಗೂ, ಭಾರತೀಯ ಯೋಧರಿಗೂ ಹೆಮ್ಮೆಯ ಸಂಕೇತವಾಗಿದೆ ಎಂದು ತಿಳಿಸಿದರು.
ರೋಟರಿ ಐಕಾನ್ಸ್ ಅಧ್ಯಕ್ಷ ಎಂ.ಬಿ.ಸಂಪತ್ ಮಾತನಾಡಿದರು. ಮಾಜಿ ಸೈನಿಕರಾದ ವಿ.ಎಸ್.ರಮೇಶ್, ಕೆ.ಪಿ.ಗಣೇಶ್, ಎಂ.ರಾಮು, ಕೆ.ಸಿ.ಜಯಚಂದ್ರ, ತಿಮ್ಮೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ಸಂಸ್ಥೆಯ ಖಜಾಂಚಿ ಬಿ.ಆರ್.ಗಣೇಶ್, ಸದಸ್ಯರಾದ ಕೆ.ರಮೇಶ್, ಸಿ.ಎನ್.ವಿಜಯ್, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಧ್ರುವ ಕುಮಾರ್, ಮುದ್ದಪ್ಪ ಕೃಷ್ಣಕುಮಾರ್, ಕೆ.ಪಿ.ಪೂಣಚ್ಚ, ಪುಷ್ಪಕರ್, ಮಲ್ಲಯ್ಯ, ಎಚ್.ಎನ್.ರಾಮು, ಪ್ರವೀಣ್ ಕುಮಾರ್, ಕೆ.ಟಿ.ಯೋಗೇಶ್, ಮಹದೇವ, ಶಿವು, ಜೆ.ಸಿ.ವಿಕ್ರಂರಾಜ್ ಇದ್ದರು.
ಆದಿ ಚುಂಚನಗಿರಿ ವಿದ್ಯಾಸಂಸ್ಥೆ: ಪಟ್ಟಣದ ಆದಿಚುಂಚನಗಿರಿ ಕಾಲೇಜಿನಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಆದಿಚುಂಚನಗಿರಿ ಕಾಲೇಜು ವತಿಯಿಂದ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷ ಜಿ.ಸಿ.ವಿಕ್ರಂ ರಾಜ್ ಭಾಗವಹಿಸಿ ಮಾತನಾಡಿದರು. ಈ ವಿಜಯೋತ್ಸವ ದೇಶದ ಪ್ರತಿಯೊಬ್ಬ ಭಾರತೀಯನಿಗೂ, ಭಾರತೀಯ ಯೋಧರಿಗೂ ಹೆಮ್ಮೆಯ ಸಂಕೇತವಾಗಿದೆ ಎಂದು ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಎಚ್.ಎನ್.ಸುಧಾಕರ್ ಮಾತನಾಡಿ, ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅಪಾರವಾದದ್ದು, ಅವರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ ಮನೋಜ್ ಕುಮಾರ್ ಪಾಂಡೆ, ಸೌರಭ್ ಕಾಲಿಯ, ಮುಂತಾದವರ ಜೀವನ ಚರಿತ್ರೆಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅವರ ದೇಶ ಪ್ರೇಮವನ್ನು ಯುವ ಸಮೂಹ ಮೈಗೂಡಿಸಿಕೊಂಡು ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು ಎಂದರು.
ನಿವೃತ್ತ ಸೈನಿಕರಾದ ಜಿ. ಸಿ.ವಿಕ್ರಂ ರಾಜ್, ರವಿಕುಮಾರ್, ಕೃಷ್ಣ, ರಂಜೀತ್ ಅವರನ್ನು ಸನ್ಮಾನಿಸಲಾಯಿತು.
ಬಿಜಿಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಕೆ. ಆರ್. ಪ್ರವೀಣ್, ಕಿರಣ್, ಪಿರಿಯಾಪಟ್ಟಣ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆನಂದ್, ಉಪಾಧ್ಯಕ್ಷ ಚಂದ್ರೇಗೌಡ, ಖಜಾಂಚಿ ಮನು, ಉಪನ್ಯಾಸಕರಾದ ಸ್ವಾಮಿಗೌಡ ಮಹದೇವ್, ಶ್ರೀನಿವಾಸ್, ಸ್ವಾಮಿ, ಮಂಜುನಾಥ್, ಶ್ರುತಿ, ಮೋಹನ್, ಇಲ್ಯಾಸ್ ಖಾನ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ಪಿರಿಯಾಪಟ್ಟಣ ಲಯನ್ಸ್ ಕ್ಲಬ್ನಿಂದ ನಿವೃತ್ತ ಸೈನಿಕರಿಗೆ ಸನ್ಮಾನ: ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಲಯನ್ಸ್ ಕ್ಲಬ್ ಸದಸ್ಯರು ಸಂಭ್ರಮಾಚರಣೆ ನಡೆಸಿ ನಿವೃತ್ತ ಸೈನಿಕರಿಗೆ ಸನ್ಮಾನ ಮಾಡಿ ಸಿಹಿ ಹಂಚಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಜೆ.ಗಿರೀಶ್, ಖಜಾಂಚಿ ಆನಂದ್, ಸದಸ್ಯರಾದ ಕೆ. ಎ. ಮಹದೇವಪ್ಪ, ಕುಮಾರ್, ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.