ADVERTISEMENT

ಕೇರಳಕ್ಕೆ ಮಾರಾಟವಾಗಿದ್ದ ಯುವತಿ ರಕ್ಷಣೆ

ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸರು– ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:59 IST
Last Updated 6 ಮೇ 2019, 19:59 IST

ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಗ್ರಾಮವೊಂದರಿಂದ ಕೇರಳದ ಶ್ರೀಮಂತ ವ್ಯಕ್ತಿಯೊಬ್ಬರಿಗೆ ಮದುವೆ ನೆಪದಲ್ಲಿ ಮಾರಾಟವಾಗಿದ್ದ ದಲಿತ ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ
ರಕ್ಷಿಸಿದ್ದಾರೆ.

ಈ ಕುರಿತು ದೂರು ಸ್ವೀಕರಿಸಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿ ಜಶೀಲಾ ಅವರು ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.

ಏನಿದು ಪ್ರಕರಣ?: ಎಚ್.ಡಿ.ಕೋಟೆ ತಾಲ್ಲೂಕಿನ ಗ್ರಾಮವೊಂದರಲ್ಲಿ, ತಂದೆ ಇಲ್ಲದ 21 ವರ್ಷದ ಬಡ ದಲಿತ ಯುವತಿಯನ್ನು ಬಲವಂತವಾಗಿ ಕೇರಳದ 42 ವರ್ಷದ ಶ್ರೀಮಂತರೊಬ್ಬನಿಗೆ 20 ದಿನಗಳ ಹಿಂದೆ ಮದುವೆ ಮಾಡಿಕೊಡಲಾಯಿತು.

ADVERTISEMENT

ಯುವತಿಯು ಮದುವೆಯಾಗಿ ಕೇರಳಕ್ಕೆ ಹೋದಾಗ ತಾನು ಮಾರಾಟವಾಗಿರುವುದು ಗೊತ್ತಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಯುವತಿಯನ್ನು ತಾಲ್ಲೂಕಿನ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳು ರಕ್ಷಿಸಿದ್ದಾರೆ. ಆದರೆ, ಈ ಕುರಿತು ದೂರು ಸ್ವೀಕರಿಸಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದಾರೆ.

ಕೊನೆಗೆ, ಯುವತಿಯು ಸಾಂತ್ವನ ಕೇಂದ್ರದ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ ಸಿಂಗ್‌ ಅವರಿಗೆ ಘಟನೆ ಕುರಿತು ದೂರು
ನೀಡಿದ್ದಾರೆ.

‘ಕೇರಳದ ಶ್ರೀಮಂತ ವ್ಯಕ್ತಿಯಿಂದ ಹಣ ಪಡೆದ ಮಧ್ಯವರ್ತಿಗಳು, ಮದುವೆ ನೆವದಲ್ಲಿ ತನ್ನನ್ನು ಮಾರಾಟ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಸದ್ಯ,
ಯುವತಿಯನ್ನು ರಕ್ಷಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ಪದ್ಮಾ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್‌ಪಿ, ‘ಘಟನೆ ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲಿಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.