ಮೈಸೂರು: ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಶೋಕಪುರಂನಲ್ಲಿರುವ ನಿವೇಶನಗಳ ಖಾತೆಗೆ ಸಂಬಂದಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಾಗುತ್ತಿದ್ದು, ‘ಮನೆ-ಮನೆಗೂ ಖಾತೆ’ ವಿತರಿಸುವ ಕಾರ್ಯಕ್ರಮ ಆರಂಭಿಸಲಾಗಿದೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ನಗರದ ಅಶೋಕಪುರಂನ ಎನ್.ಟಿ.ಎಂ. ಶಾಲೆ ಆವರಣದಲ್ಲಿ ‘ಮನೆ-ಮನೆಗೂ ಖಾತೆ’ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಮೈಸೂರು ಮಹಾಸಂಸ್ಥಾನದಲ್ಲಿ ಪರಿಶಿಷ್ಟ ಜಾತಿಯವರಿಗೆ ಅಶೋಕಪುರಂ ಭಾಗದಲ್ಲಿ 1905ರಲ್ಲಿ ಮಹಾರಾಜರು ನಿವೇಶನಗಳನ್ನು ಬಳುವಳಿಯಾಗಿ ನೀಡಿದ್ದರು. 1935ರಲ್ಲಿ ಪುರಸಭೆ ಅಸ್ತಿತ್ವದಲ್ಲಿದ್ದಾಗ ಖಾತೆ ಮಾಡಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಗೊಂಡು ಅಂದಿನಿಂದ ಈವರೆಗೂ ಶೇ 5ರಷ್ಟು ಮಂದಿ ಮಾತ್ರ ಹೊಂದಿದ್ದಾರೆ. ಉಳಿದವರು ಖಾತೆ, ಕಂದಾಯ ಮಾಡಿಸಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಸಮಸ್ಯೆ ಉಂಟಾಗಿದೆ’ ಎಂದರು.
‘ಮಹಾನಗರ ಪಾಲಿಕೆಯಲ್ಲಿ ಖಾತೆ ನೋಂದಣಿ, ವರ್ಗಾವಣೆ ಸಾಧ್ಯವಾಗುತ್ತಿಲ್ಲ. ಪಾಲಿಕೆ ಮತ್ತು ವಿವಿಧ ಅಭಿವೃದ್ಧಿ ನಿಗಮಗಳಿಂದ ಯೋಜನೆಗಳನ್ನು ಪಡೆದುಕೊಳ್ಳದೆ ಅವಕಾಶ ವಂಚಿತರಾಗುತ್ತಿರುವುದು ಕಂಡುಬಂದಿದೆ. ಈ ಸಮಸ್ಯೆಗೆ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಶಾರದಮ್ಮ ಈಶ್ವರ್ ಹಾಗೂ ಪಿ.ಟಿ. ಕೃಷ್ಣ, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಕಂದಾಯ ಉಪ ಆಯುಕ್ತ ದಾಸೇಗೌಡ, ವಲಯ ಸಹಾಯಕ ಆಯುಕ್ತ ನಾಗರಾಜು, ಮುಖಂಡರಾದ ವಿಜಯ್ಕುಮಾರ್, ವಾಸು, ಗೋವಿಂದರಾಜು, ರವಿ, ಮಧುಸೂದನ್, ಬಿಲ್ಲಯ್ಯ, ಈಶ್ವರ್, ನಾಗರತ್ನಾ, ದೀಪು, ರಾಜೀವ್, ಮಹದೇವ್, ರಾಜು, ರಂಗಸ್ವಾಮಿ, ಮುರಳೀಧರ್ ಮತ್ತು ಪುನೀತ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.