ಹುಣಸೂರು: ವಾಣಿಜ್ಯ ಬೆಳೆ ಶುಂಠಿಯಲ್ಲಿ ಕಾಣಿಸಿಕೊಂಡಿರುವ ಎಲೆ ಚುಕ್ಕಿ ಮತ್ತು ಕೊಳೆ ರೋಗಕ್ಕೆ ರೈತರು ಆತಂಕಪಡದೆ ವೈಜ್ಞಾನಿಕವಾಗಿ ಬೆಳೆಯ ನಿರ್ವಹಣೆ ಕ್ರಮ ಅನುಸರಿಸುವುದರಿಂದ ರೋಗ ನಿಯಂತ್ರಣ ಮಾಡಲು ಸಾಧ್ಯ ಎಂದು ಕೃಷಿ ವಿಜ್ಞಾನಿ ಕಿರಣ್ ಕುಮಾರ್ ಹೇಳಿದರು.
ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದಲ್ಲಿ ನಡೆದ ಶುಂಠಿ ಬೇಸಾಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಶುಂಠಿ ಬೆಳೆಯಲ್ಲಿ ಕಾಣಿಸಿಕೊಂಡ ರೋಗ ಕುರಿತಂತೆ ಮಾತನಾಡಿ, ಫಸಲಿನಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗ ಬಾಧೆ ನಿಯಂತ್ರಣಕ್ಕೆ ರೈತರು ಮುಂಜಾಗ್ರತಾ ಕ್ರಮವಾಗಿ ಕಾಂಟಕ್ಟ್ ಶಿಲೀಂಧ್ರ ನಾಶಕಗಳಾದ ಮ್ಯಾಂಕೋಜಿಬ್ 2 ಗ್ರಾಂ ಅಥವಾ ಕಾಪರ್ ಆಕ್ಸಿಕ್ಲೋರೈಡ್ 2 ಗ್ರಾಂ ಪ್ರತಿ ಲೀ ನೀರಿಗೆ ಅಥವಾ ಶೇ 1 ರಷ್ಟು ಬೋರ್ಡ್ ದ್ರಾವಣದ ಅಂಟು ಸೇರಿಸಿ ಸಿಂಪಡಿಸಬೇಕು.
ರೋಗ ಬಾಧೆ ಕಾಣಿಸಿಕೊಂಡಲ್ಲಿ ಶಿಲೀಂಧ್ರ ನಾಶಕಗಳಾದ ಪ್ರೋಪಿಕೊನಜೋಲ್ ಅಥವಾ ಟೆಬೊಕೊನಕಜೋಲ್, ಹೆಕ್ಸೋಕೊನಜೋಲ್ 1 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ 10 ದಿನಗಳ ಅಂತರದಲ್ಲಿ ಪರ್ಯಾಯವಾಗಿ ಕಾರ್ಬೆಂಡಾಜಿಮ್, ಮ್ಯಾಂಕೊಜಿಬ್ 2 ಗ್ರಾಂ ಸಿಂಪಡಿಸಬೇಕು ಎಂದರು.
ಕೃಷಿ ತಜ್ಞ ಸಿದ್ದಪ್ಪ ಮಾತನಾಡಿ, ಶುಂಠಿ ಬೇಸಾಯ ಮಾಡುವ ಮುನ್ನ ರೈತರು ಹೊಲ ಅಥವಾ ಗದ್ದೆಯ ಮಣ್ಣು ಪರೀಕ್ಷೆ ಮಾಡಿಸಬೇಕು. ಮಣ್ಣು ಪರೀಕ್ಷೆ ವರದಿ ಆಧರಿಸಿ ಭೂಮಿಗೆ ಅಗತ್ಯ ಬೇಕಿರುವ ಶಿಫಾರಸು ಮಾಡಿದ ಗೊಬ್ಬರ ನೀಡಬೇಕು. ಇದಲ್ಲದೆ ರೈತರು ಬೀಜ ಬಿತ್ತನೆ ಕಾರ್ಯ ಮಾಡುವ ಮುನ್ನ ಗುಣಮಟ್ಟ ಹಾಗೂ ತಳಿ ಆಯ್ಕೆ ಮಾಡುವಲ್ಲಿ ಜಾಗರೂಕತೆ ವಹಿಸಬೇಕು ಎಂದರು.
ಹುಣಸೂರು ತಾಲ್ಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ, ಕ್ಷೇತ್ರದಲ್ಲಿ 10 ರಿಂದ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೇಸಾಯ ನಡೆದಿದ್ದು, ಈ ಪೈಕಿ ಹನಗೋಡು ಭಾಗ ಸೇರಿದಂತೆ ಕೆಲವು ಭಾಗದಲ್ಲಿ ಎಲೆಚುಕ್ಕಿ ರೋಗ ಬಾಧೆ ಕಾಣಿಸಿಕೊಂಡಿದೆ. ರೈತರು ಆತಂಕಗೊಳ್ಳದೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡಿ ಫಸಲು ಉಳಿಸಿಕೊಳ್ಳಬಹುದು ಎಂದರು.
ಈ ಸಾಲಿನಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿಂದಲೇ ಮಳೆ ಆರಂಭವಾಗಿ ಶುಂಠಿ ಬೇಸಾಯಕ್ಕೆ ಹವಾಮಾನ ಏರುಪೇರಾಗಿದೆ. ಶುಂಠಿ ಹೊಲದಲ್ಲಿ ನೀರು ನಿಲ್ಲದಂತೆ ಬಸಿದು ಹೋಗಲು ಕಾಲುವೆ ನಿರ್ಮಿಸುವುದರಿಂದಲೂ ಕೆಲವು ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಣಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಣ್ಣ ವಹಿಸಿದ್ದರು. ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ರವಿ, ನಿತಿನ್, ಫಯಾಜ್ ಸೇರಿದಂತೆ ಸುತ್ತಲಿನ ಬೆಳೆಗಾರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.