ಮೈಸೂರು: ‘ನಿತ್ಯಸುಮಂಗಲಿ ಸಿದ್ದಲಿಂಗಯ್ಯ ಆಗಬೇಡಿ. ಇವರು ಯಾವುದೇ ಸರ್ಕಾರ ಬಂದರೂ ತಾಳಿ ಕಟ್ಟಿಸಿಕೊಂಡು ಪದವಿ ಗಿಟ್ಟಿಸಿಕೊಳ್ಳುತ್ತಾರೆ. ಇಂಥ ವ್ಯಕ್ತಿಗಳ ಅವಶ್ಯ ಸಮಾಜಕ್ಕೆ ಇಲ್ಲ. ಬದಲಾಗಿ ದೇವನೂರ ಮಹಾದೇವ ಅವರಂತಾಗಿ’ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಿ.ಪಿ.ಮಹೇಶ್ಚಂದ್ರ ಗುರು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಚಂದು ಸಾಹೇಬ ಬರೆದಿರುವ ‘ಒಡಲ ದನಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
‘ಕಾಂಗ್ರೆಸ್ ಸರ್ಕಾರವಿದ್ದಾಗ ಕವಿ ಸಿದ್ದಲಿಂಗಯ್ಯ ಅಲ್ಲೂ ಹೋಗಿ ತಾಳಿ ಕಟ್ಟಿಸಿಕೊಳ್ಳುತ್ತಾರೆ. ಬಳಿಕ ಜೆಡಿಎಸ್ ಬಂದಾಗ ಅಲ್ಲೊಂದು ತಾಳಿ, ಅಲ್ಲೊಂದು ಪದವಿ. ಈಗ ಬಿಜೆಪಿ ಸರ್ಕಾರವಿದ್ದು, ಮೂರನೇ ತಾಳಿ ಅವರ ಕುತ್ತಿಗೆಯಲ್ಲಿದೆ. ಸಿದ್ಧಾಂತ, ಬದ್ಧತೆ ಬದಲಿಸುತ್ತಲೇ ಇದ್ದಾರೆ’ ಎಂದು ಟೀಕಿಸಿದರು.
‘ದೇವನೂರ ಮಹಾದೇವ ಯಾವತ್ತೂ ಬದಲಾಗಿಲ್ಲ. ಸಿಎಎ ಸೇರಿದಂತೆ ಯಾವುದೇ ವಿಚಾರ ಬಂದರೂ ಈ ವಯಸ್ಸಲ್ಲೂ ಚಳಿ ಬಿಟ್ಟು ಹೋರಾಟ ಮಾಡುತ್ತಾರೆ. ಮೋದಿ ಸರ್ಕಾರವನ್ನು ಗೌರವಯುತವಾಗಿ, ಪ್ರಜಾಸತ್ತಾತ್ಮಕವಾಗಿ ಟೀಕೆ ಮಾಡುತ್ತಾರೆ. ಸಿದ್ದಲಿಂಗಯ್ಯ ಅವರಂತೆ ಮೌನವಾಗಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.