ADVERTISEMENT

ಮಹಾಲಯ ಅಮಾವಾಸ್ಯೆ: ಮಾದಪ್ಪನಿಗೆ ಅನ್ನದ ಬುತ್ತಿ ಅರ್ಪಿಸಿದ ಭಕ್ತರು

ಎಣ್ಣೆಮಜ್ಜನ ಸೇವೆ; ಹರಿದು ಬಂದ ಭಕ್ತರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 7:05 IST
Last Updated 8 ಅಕ್ಟೋಬರ್ 2018, 7:05 IST
ಸುತ್ತೂರಿನಿಂದ ಬಂದಿದ್ದ ಭಕ್ತರು ಅನ್ನ ಪ್ರಸಾದವನ್ನು ರಾಶಿ ಮಾಡಿ ಪೂಜೆ ಸಲ್ಲಿಸಿದರು
ಸುತ್ತೂರಿನಿಂದ ಬಂದಿದ್ದ ಭಕ್ತರು ಅನ್ನ ಪ್ರಸಾದವನ್ನು ರಾಶಿ ಮಾಡಿ ಪೂಜೆ ಸಲ್ಲಿಸಿದರು   

ಮಹದೇಶ್ವರ ಬೆಟ್ಟ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ಇಲ್ಲಿನ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ನೆರವೇರಿತು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು, ಅನ್ನ, ಉರಿಗಡಲೆ, ಪಂಚಾಮೃತದ ಪ್ರಸಾದವನ್ನು ಸ್ವಾಮಿಗೆ ಅರ್ಪಿಸಿ ಹರಕೆ ತೀರಿಸಿದರು.

ಮೈಸೂರಿನ ಸುತ್ತೂರು ಗ್ರಾಮದಿಂದ ಸುಮಾರು 300 ಮಂದಿ ದೇವಸ್ಥಾನಕ್ಕೆ ಬಂದಿದ್ದರು. ಅವರು ತಂದಿದ್ದ ಪುಳಿಯೊಗರೆ, ಮೊಸರನ್ನ, ಇನ್ನಿತರೆ ತಿನಿಸುಗಳ ಪ್ರಸಾದವನ್ನು ಒಂದೆಡೆ ಇಟ್ಟು ಪೂಜೆ ಸಲ್ಲಿಸಿದರು. ಮಾದಪ್ಪನಿಗೆ ಮೀಸಲಿಟ್ಟು ಸಾಮೂಹಿಕವಾಗಿ ಪ್ರಸಾದ ಸ್ವೀಕರಿಸಿದರು.

ADVERTISEMENT

‘ಎಣ್ಣೆಮಜ್ಜನದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಗ್ರಾಮದ ಎಲ್ಲರೂ ಬುತ್ತಿಯನ್ನು ತರುವುದು ಕಡ್ಡಾಯ. ಹರಕೆ ಹೊರುವ ಪ್ರತಿ ಕುಟುಂಬವು ಊರಿನಿಂದ ಮಾದಪ್ಪನ ಸನ್ನಿಧಿವರೆಗೆ ಬರುವವರೆಗೂ ಉಪವಾಸ ಇರಬೇಕು. ಬುತ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸಾಮೂಹಿಕವಾಗಿ ಪ್ರಸಾದ ಸೇವಿಸುತ್ತೇವೆ. ಇದು, ಅನೇಕ ದಶಕಗಳಿಂದ ನಡೆದುಕೊಂಡು ಬಂದಿದೆ’ ಎಂದು ಸುತ್ತೂರಿನ ಗ್ರಾಮಸ್ಥರು ಹೇಳಿದರು.

ಹನೂರು ತಾಲ್ಲೂಕಿನ ಬೆಳ್ತೂರಿನಿಂದ ಬಂದಿದ್ದ ಕೆಂಪರಾಜು ಮಾತನಾಡಿ, ‘ಪ್ರತಿ ವರ್ಷ ಮಹಾಲಯ ಅಮಾವಾಸ್ಯೆಯ ಎಣ್ಣೆಮಜ್ಜನದ ದಿನದಂದು ಕುಟುಂಬ ಸಮೇತರಾಗಿ ಬರುತ್ತೇವೆ. ಊರಿನಿಂದ ತಂದ ಉರಿಗಡಲೆಯನ್ನು ಮಾದಪ್ಪನ ಬಳಿ ಇಟ್ಟು ಪೂಜೆ ಸಲ್ಲಿಸುತ್ತೇವೆ. ಬಳಿಕ, ಎಲ್ಲರಿಗೂ ಹಂಚುತ್ತೇವೆ. ಇದರಿಂದ ನಮ್ಮ ಕಷ್ಟಗಳು ಪರಿಹಾರ ಆಗುತ್ತವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.