ADVERTISEMENT

ಮೈಸೂರು: ‘ನಿರಂಜನ ಮಠ ರಕ್ಷಿಸಿದ ರಾಮಕೃಷ್ಣಾಶ್ರಮ’

ಎನ್‌ಟಿಎಂ ಶಾಲೆ, ವಿವೇಕ ಸ್ಮಾರಕ ಮುಂದುವರಿದ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 3:46 IST
Last Updated 13 ಆಗಸ್ಟ್ 2021, 3:46 IST
ಮೈಸೂರಿನಲ್ಲಿ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಗುರುವಾರ ಎನ್‌ಟಿಎಂ ಸರ್ಕಾರಿ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು. ಹೋರಾಟಗಾರರಾದ ಕೊ.ಸು.ನರಸಿಂಹಮೂರ್ತಿ, ಪುರುಷೋತ್ತಮ್, ಭಾನುಮೋಹನ್, ಮೂಗೂರು ನಂಜುಂಡಸ್ವಾಮಿ ಇದ್ದಾರೆ
ಮೈಸೂರಿನಲ್ಲಿ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಗುರುವಾರ ಎನ್‌ಟಿಎಂ ಸರ್ಕಾರಿ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು. ಹೋರಾಟಗಾರರಾದ ಕೊ.ಸು.ನರಸಿಂಹಮೂರ್ತಿ, ಪುರುಷೋತ್ತಮ್, ಭಾನುಮೋಹನ್, ಮೂಗೂರು ನಂಜುಂಡಸ್ವಾಮಿ ಇದ್ದಾರೆ   

ಮೈಸೂರು: ವಿವೇಕಸ್ಮಾರಕ ಮತ್ತು ನಿರಂಜನಮಠ ಕುರಿತು ಗೊಂದಲ ಬೇಡ. ಪಾಳುಬಿದ್ದಿದ್ದ ನಿರಂಜನಮಠದ ಕಟ್ಟಡವನ್ನು ರಾಮಕೃಷ್ಣಾಶ್ರಮವು ಜೀರ್ಣೋದ್ಧಾರದ ಮೂಲಕ ಸಂರಕ್ಷಿಸಿಕೊಂಡು, ಮಠದ ಲಕ್ಷಣವನ್ನು ಕಾಪಾಡಿಕೊಂಡು ಬಂದಿದೆ ಎಂದು ಕೇಂದ್ರದ ದೂರಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕರು ಎನ್.ಎಸ್. ಚಕ್ರವರ್ತಿ ಹಾಗೂ ವಕೀಲ ಜೆ.ಕೆ.ಬಸಪ್ಪ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾರು ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ ನ್ಯಾಯಾಲಯದ ತೀರ್ಪನ್ನು ಅಗೌರವಿಸುವುದು ನ್ಯಾಯಸಮ್ಮತವಲ್ಲ ಎಂದು ಅವರು ಹೇಳಿದ್ದಾರೆ.

ವಿವೇಕ ಶಿಕ್ಷಣದ ಮೂಲಕ 6 ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸಲು ರಾಮಕೃಷ್ಣ ಆಶ್ರಮದ ಕೊಡುಗೆ ಕ್ರಿಯಾತ್ಮಕ ಮಾದರಿ. ಎನ್‌ಟಿಎಂ ಕನ್ನಡ ಶಾಲೆಗೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ADVERTISEMENT

ವಿವೇಕಸ್ಮಾರಕದಲ್ಲಿ ಯುವಜನತೆಗಾಗಿ ಅಲ್ಪಾವಧಿಯ ಕೋರ್ಸ್‍ಗಳು, ಕೌಶಲ್ಯಾಭಿವೃದ್ಧಿ ತರಬೇತಿ, ಕನ್ನಡ, ಇಂಗ್ಲಿಷ್ ಭಾಷಾ ಸಾಮರ್ಥ್ಯ ಅಭಿವೃದ್ಧಿ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳು ನಡೆಯಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಡೆಯದ ಉದ್ಘಾಟನೆ ನೆರವೇರಿಸಿದ ರಾಮಕೃಷ್ಣಾಶ್ರಮ’
ಮೈಸೂರು:
‘ಇಲ್ಲದೇ ಇದ್ದ ವಿವೇಕ ಸ್ಮಾರಕವನ್ನು ನವೀಕರಿಸಿ, ನಡೆಯದ ಉದ್ಘಾಟನೆಯನ್ನು ನೆರವೇರಿಸಿ ಒಂದು ಸಾಕ್ಷ್ಯವನ್ನು ಸೃಷ್ಟಿಸಿರುವವರು ವೃತ್ತಿಪರ ವಂಚಕ ಅಪರಾಧಿಗಳಲ್ಲವೇ’ ಎಂದು ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ ಪ್ರಶ್ನಿಸಿದ್ದಾರೆ.

ರಾಮಕೃಷ್ಣ ಆಶ್ರಮವು 2012 ರ ಏಪ್ರಿಲ್ 22 ರಂದು ನಿರಂಜನ ಮಠದಲ್ಲಿ ಸ್ಥಾಪಿಸಿರುವ ಶಿಲಾ ಫಲಕದಲ್ಲಿ ನವೀಕೃತ ವಿವೇಕ ಸ್ಮಾರಕದ ಉದ್ಘಾಟನೆ ಎಂದಿದೆ. ರಾಮಕೃಷ್ಣ ಆಶ್ರಮದ ಕೋಲ್ಕತ್ತಾ ಬೇಲೂರು ಮಠದ ಮುಖ್ಯಸ್ಥರು ಹಾಗೂ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡ ಅವರು ಉದ್ಘಾಟನೆ ನೆರವೇರಿಸಿದೆ ಎಂದಿದೆ. ಅಂದು ನಡೆದ ಉದ್ಘಾಟನೆ ಕಾರ್ಯಕ್ರಮ ಮಾರನೆಯ ದಿನದ ಪತ್ರಿಕೆಗಳಲ್ಲಿ ವರದಿಯಾಗಿದೆಯೇ ಎಂದು ಅವರು ಕೇಳಿದ್ದಾರೆ.

ರಾಮಕೃಷ್ಣ ವಿವೇಕಾನಂದ ಅವರು ಇವರ ವಂಚನೆಗೆ ಬಳಸುವ ಉತ್ಸವಮೂರ್ತಿಗಳಾಗಿದ್ದಾರೆ. ಜನ ಇವರ ಬಗ್ಗೆ ಇರಿಸಿಕೊಂಡಿರುವ ಸದಾಭಿಪ್ರಾಯವೇ ಮತ್ತೆ ಮತ್ತೆ ವಂಚಿಸಲು ಬಂಡವಾಳವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.