ADVERTISEMENT

ಕೋವಿಡ್ ನೆಪದಲ್ಲಿ ಮೇಕೆದಾಟು ಪಾದಯಾತ್ರೆ ತಡೆಯಲು ಹುನ್ನಾರ: ಡಿಕೆಶಿ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2022, 6:56 IST
Last Updated 3 ಜನವರಿ 2022, 6:56 IST
   

ಮೈಸೂರು: 'ಕೋವಿಡ್ ವಿಚಾರ ಮುಂದಿಟ್ಟುಕೊಂಡು ಮೇಕೆದಾಟು ಪಾದಯಾತ್ರೆ ತಡೆಯಲು ಬಿಜೆಪಿ ಸರ್ಕಾರ ಹುನ್ನಾರ ನಡೆಸುತ್ತಿದೆ. ಜೈಲಿಗೆ ಕಳುಹಿಸಿದರೂ ಪರವಾಗಿಲ್ಲ ಪಾದಯಾತ್ರೆ ಮುಂದುವರಿಯಲಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದರು.

'ಲಾಕ್‌ಡೌನ್ ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಲಾಕ್‌ಡೌನ್ ಮಾಡಲಿ, ಬೇರೆ ಏನೇ ಮಾಡಲಿ ಪಾದಯಾತ್ರೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕೋವಿಡ್‌ ಇದ್ದರೂ ಮುಖ್ಯಮಂತ್ರಿ, ಮಂತ್ರಿಗಳು ಮದುವೆಯಲ್ಲಿ ಪಾಲ್ಗೊಂಡು ಮಾರ್ಗಸೂಚಿ ಉಲ್ಲಂಘಿಸಿಲ್ಲವೇ? ಅವರ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ' ಎಂದು ಸೋಮವಾರ ಇಲ್ಲಿ ಸುದ್ದಿಗೊಷ್ಠಿಯಲ್ಲಿ ಪ್ರಶ್ನಿಸಿದರು.

'ಮುಂಜಾಗ್ರತೆಯ ಕ್ರಮ ತೆಗೆದುಕೊಂಡು ಪಾದಯಾತ್ರೆ ನಡೆಸುತ್ತೇವೆ. ಒಂದು ಲಕ್ಷ ಮಾಸ್ಕ್ ತರಿಸಲಿದ್ದೇವೆ.10 ವೈದ್ಯಕೀಯ ತಂಡ ಇರಲಿದ್ದು, 100 ವೈದ್ಯರು ಪಾಲ್ಗೊಳ್ಳುತ್ತಾರೆ' ಎಂದು ತಿಳಿಸಿದರು.

ADVERTISEMENT

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, 'ಕೋವಿಡ್ ನೆಪ ಮುಂದಿಟ್ಟುಕೊಂಡು ಪಾದಯಾತ್ರೆ ತಡೆಯಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಏನೇ ಪ್ರಯತ್ನ ನಡೆಸಿದರೂ ನಮ್ಮ ಪಾದಯಾತ್ರೆ ತಡೆಯಲು ಆಗಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.