ADVERTISEMENT

ತಾಕತ್ತಿದ್ದರೆ ನನ್ನ ವಜಾ ಮಾಡಲಿ: ಸಿ.ಟಿ.ರವಿ

ಬಹುರೂಪಿ ನಾಟಕೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 12:45 IST
Last Updated 15 ಫೆಬ್ರುವರಿ 2020, 12:45 IST

ಮೈಸೂರು: ‘ಟಿಪ್ಪು ಬಗ್ಗೆ ನಾನೂ ಮಾತನಾಡಿದ್ದೇನೆ. ತಾಕತ್ತಿದ್ದರೆ ನನ್ನನ್ನೂ ವಜಾ ಮಾಡಲಿ’ ಎನ್ನುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ಸಮರ್ಥಿಸಿಕೊಂಡರು.

ಬಹುರೂಪಿ ನಾಟಕೋತ್ಸವದ ಉದ್ಘಾಟನೆ ವೇಳೆ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಟಿಪ್ಪು ವಿರುದ್ಧ ಮಾತನಾಡಿದ ಕಾರಣಕ್ಕೆ ನಿರ್ದೇಶಕರನ್ನು ವಜಾ ಮಾಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಟಿಪ್ಪು ಮತಾಂಧ. ಕೊಡವರ ಮೇಲೆ ದೌರ್ಜನ್ಯ ಮಾಡಿದ್ದು ಸತ್ಯ’ ಎಂದರು.

ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ಕೂಡಾ ಅಷ್ಟೇ ಸತ್ಯ. ಆದರೆ ಬ್ರಿಟಿಷರ ವಿರುದ್ಧದ ಹೋರಾಟವನ್ನು ಮಾತ್ರ ವೈಭವೀಕರಿಸಿ, ಕೊಡವರು ಹಾಗೂ ಇತರರ ಮೇಲೆ ಮಾಡಿದ ದೌರ್ಜನ್ಯ ಮರೆಮಾಚುವುದು ತಪ್ಪು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ADVERTISEMENT

‘ರಂಗಾಯಣಕ್ಕೆ ಹೊಸ ದಿಕ್ಕು ತೋರಿಸಬೇಕೆಂಬ ಉದ್ದೇಶದಿಂದ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದೇವೆ. ನಮ್ಮ ಆಯ್ಕೆ ಸರಿಯಾಗಿಯೇ ಇದೆ. ಅವರ ನೇತೃತ್ವದಲ್ಲಿ ರಂಗಾಯಣ ಹೊಸ ಎತ್ತರಕ್ಕೇರಲಿದೆ’ ಎಂದು ನುಡಿದರು.

‘ಕೊಡಗಿನವರಿಗೆ ಎದೆಕೊಟ್ಟು ಅಭ್ಯಾಸವಿದೆಯೇ ಹೊರತು ಬೆನ್ನು ತೋರಿಸುವ ಅಭ್ಯಾಸ ಇಲ್ಲ. ರಂಗಾಯಣಕ್ಕೆ ಹೊಸ ದಿಕ್ಕನ್ನು ತೋರಿಸಲು ಎದೆ ಕೊಡುವವರು ಬೇಕು. ಆದ್ದರಿಂದ ಅವರಿಗೆ ಜವಾಬ್ದಾರಿ ನೀಡಲಾಗಿದೆ’ ಎನ್ನುವ ಮೂಲಕ ಆಯ್ಕೆ ಸಮರ್ಥಿಸಿಕೊಂಡರು.

ಕಾರ್ಯಪ್ಪ ಅವರನ್ನು ವಜಾಗೊಳಿಸಬೇಕು ಎಂದು ಕೆಲವು ಕಲಾವಿದರು ಸರ್ಕಾರವನ್ನು ಆಗ್ರಹಿಸಿದ್ದರು. ರಂಗಾಯಣದ ನಿರ್ದೇಶಕರ ನಿಲುವನ್ನು ವಿರೋಧಿಸಿ ಕನ್ನಡ ವಿಕಾಸ ವೇದಿಕೆಯ ಅಧ್ಯಕ್ಷ ಪ.ಮಲ್ಲೇಶ್‌ ಅವರು ನಾಟಕೋತ್ಸವದ ಗೋಷ್ಠಿಯ ಅಧ್ಯಕ್ಷತೆ ನಿರಾಕರಿಸಿದ್ದಾರೆ.

ಚಾಲನೆ: ಶುಕ್ರವಾರ ಸಂಜೆ ನಡೆದ ಸಮಾರಂಭದಲ್ಲಿ ಹಿರಿಯ ನಟ ಅನಂತನಾಗ್‌ ಅವರು ಬಹುರೂಪಿ ನಾಟಕೋತ್ಸವ ಉದ್ಘಾಟಿಸಿದರು. ಫೆ.19ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಾರಿಯ ನಾಟಕೋತ್ಸವ ‘ಗಾಂಧಿ ಪಥ’ ಪರಿಕಲ್ಪನೆಯಡಿ ನಡೆಯುತ್ತಿದ್ದು, ರಂಗಾಯಣದ ಆವರಣ ಗಾಂಧಿಮಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.