ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶದ ಅಧ್ಯಯನ ವಿಭಾಗವು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಆಹಾರ ಮತ್ತು ಪೌಷ್ಟಿಕಾಂಶ’ ಕುರಿತ ಕೈಪಿಡಿಯನ್ನು ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಬಿಡುಗಡೆಗೊಳಿಸಿದರು
ಪ್ರಜಾವಾಣಿ ಚಿತ್ರ
ಮೈಸೂರು: ‘ಮಹಿಳೆ ಹಾಗೂ ತಾಯಿ ಎಂಬುದು ಆಹಾರ ವಿಜ್ಞಾನ, ವ್ಯಕ್ತಿತ್ವ ವಿಕಾಸ, ಆಹಾರ ತಂತ್ರಜ್ಞಾನವನ್ನು ಒಳಗೊಂಡ ಗೃಹ ವಿಜ್ಞಾನದ ಸಮಾನಾರ್ಥಕ ಪದಗಳು’ ಎಂದು ಸಿಎಸ್ಐಆರ್– ಸಿಎಫ್ಟಿಆರ್ಐ ನಿರ್ದೇಶಕಿ ಡಾ.ಶ್ರೀದೇವಿ ಸಿಂಗ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶದ ಅಧ್ಯಯನ ವಿಭಾಗದಲ್ಲಿ ಶುಕ್ರವಾರ ಗೃಹ ವಿಜ್ಞಾನ ಸಂಘದ ಮೈಸೂರು ಘಟಕ ಉದ್ಘಾಟಿಸಿ ಹಾಗೂ ‘ಆಹಾರ ಮತ್ತು ಪೌಷ್ಟಿಕಾಂಶ’ ಕುರಿತ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
‘ಗೃಹ ವಿಜ್ಞಾನದ ವಿಷಯವು ಮನೆಯಿಂದ ಆರಂಭವಾಗುತ್ತದೆ. ಮಗುವೊಂದು ತಾಯಿಯ ಬಳಿ ಅನೇಕ ಪ್ರಶ್ನೆಗಳನ್ನು ಕೇಳುತ್ತದೆ. ಆದರೆ ತಾಯಿ ಎಲ್ಲಿದ್ದಾರೆ ಎಂಬ ಪ್ರಶ್ನೆಯಷ್ಟೇ ತಂದೆಗೆ ಕೇಳುತ್ತದೆ. ಇಂತಹ ಸೂಕ್ಷ್ಮತೆಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ಆಹಾರ ವಿಜ್ಞಾನ, ಪೌಷ್ಟಿಕಾಂಶದ ಕುರಿತು ಬೆಳಕು ಚೆಲ್ಲುವ ಸ್ವಾಮಿನಾಥನ್ ಪುಸ್ತಕಗಳನ್ನು ಓದಬೇಕು’ ಎಂದರು.
‘ಗೂಗಲ್ ಹಾಗೂ ಇಂಟರ್ನೆಟ್ನಲ್ಲಿ ದೊರೆಯುವ ಮಾಹಿತಿಗಿಂತ ಹೆಚ್ಚಿನ ಜ್ಞಾನ ಪುಸ್ತಕದಲ್ಲಿ ದೊರೆಯುತ್ತದೆ. ತಾಳ್ಮೆ ಹಾಗೂ ನೆನೆಪಿನ ಶಕ್ತಿ ಹೆಚ್ಚುತ್ತದೆ’ ಎಂದು ಸಲಹೆ ನೀಡಿದರು.
ಕುಲಪತಿ ಎನ್.ಕೆ.ಲೋಕನಾಥ್ ಮಾತನಾಡಿ, ‘ಆಹಾರ, ಪೌಷ್ಟಿಕಾಂಶ ಹಾಗೂ ಗೃಹ ವಿಜ್ಞಾನದ ವಿಷಯಗಳು ಮುಂದುವರಿಯುತ್ತಿರುವ ಸಮಾಜಕ್ಕೆ ಅತಿ ಅಗತ್ಯ. ವಿದ್ಯಾರ್ಥಿಗಳು ವಿಭಾಗದ ಪ್ರಾಮುಖ್ಯತೆಯನ್ನು ಅರಿತು ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದರು.
ಪ್ರೊ.ಜಮುನಾ ಪ್ರಕಾಶ್, ದಿ ಬೆಂಗಳೂರು ಪ್ರಕಾಶನದ ನಿರ್ದೇಶಕ ಎ.ಎಚ್.ವಿಷ್ಣು, ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಕೋಮಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.