ADVERTISEMENT

ಕ್ಷುಲ್ಲಕ ಕಾರಣಕ್ಕೆ ಬೆಂಕಿ ಇಟ್ಟು ಕೊಲೆಗೈದರು

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:29 IST
Last Updated 27 ಮೇ 2019, 19:29 IST

ತಲಕಾಡು: ಇಲ್ಲಿಗೆ ಸಮೀಪದ ತೊಟ್ಟವಾಡಿ ಗ್ರಾಮದ ನಿಂಗರಾಜು (45) ಎಂಬುವವರನ್ನು ಭಾನುವಾರ ಸಜೀವವಾಗಿ ದಹಿಸಲಾಗಿದ್ದು, ಸೋಮವಾರ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆ ಆರೋಪದ ಮೇಲೆ, ಅದೇ ಗ್ರಾಮದ ಕಾವೇರಿ ಮತ್ತು ಅಮ್ಮಣ್ಣಮ್ಮ ದಂಪತಿಯನ್ನು ತಲಕಾಡು ಪೊಲೀಸರು ಬಂಧಿಸಿದ್ದಾರೆ.

‘ನಿಂಗರಾಜು, ತಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದಾಗಿ ಆರೋಪಿಸಿ ಈ ದಂಪತಿ ಭಾನುವಾರ ಅವರ ಮನೆ ಮುಂದೆ ಗಲಾಟೆ ಮಾಡಿದ್ದಾರೆ. ಅವರ ಕಾರಿನ ಗಾಜು ಒಡೆದುಹಾಕಿ, ಪತ್ನಿಯ ಮೇಲೂ ಹಲ್ಲೆ ಮಾಡಿದ್ದಾರೆ. ಆ ಕ್ಷಣಕ್ಕೆ ಹೆದರಿದ, ನಿಂಗರಾಜು ಅಲ್ಲಿಂದ ಓಡಿಹೋಗಿದ್ದಾರೆ. ಆದರೆ, ರಾತ್ರಿ ವೇಳೆ ಕಾವೇರಿ ಮನೆ ಬಳಿ ತೆರಳಿ ಗಲಾಟೆ ನಡೆಸಿದ್ದಾರೆ. ಆಗ, ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ’ ಎಂದು ನಿಂಗರಾಜು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪೂರ್ಣವಾಗಿ ಸುಟ್ಟು ಹೋದ ಸ್ಥಿತಿಯಲ್ಲಿದ್ದ ನಿಂಗರಾಜು ಮೃತದೇಹವು ಕಾವೇರಿ ಮನೆ ಜಗುಲಿ ಮೇಲೆಯೇ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.

ಘಟನೆಯ ನಂತರ ಪರಾರಿಯಾಗಿದ್ದ ಆರೋಪಿಗಳಿಬ್ಬರೂ ಸಂಬಂಧಿಕರ ಮನೆಯಲ್ಲಿ ಅಡಗಿದ್ದರು. ತಿ.ನರಸೀಪುರ ಸಿಪಿಐ ಎಂ.ಆರ್.ಲವ ಹಾಗೂ ತಲಕಾಡು ಠಾಣೆಯ ಪಿಎಸ್‌ಐ ಬಸವರಾಜು ಅವರು ಸೋಮವಾರ ಸಂಜೆ ಬಂಧಿಸುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.