ADVERTISEMENT

ಭೂ– ವಿವಾದ: ಅಣ್ಣನ ಕೊಲೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 14:28 IST
Last Updated 20 ಜೂನ್ 2020, 14:28 IST
   

ಎಚ್.ಡಿ.ಕೋಟೆ: 6 ಎಕರೆ ಭೂಮಿಗಾಗಿ ಅಣ್ಣ ತಮ್ಮಂದಿರ ನಡುವೆ ನಡೆದ ವಿವಾದ ತಾರಕಕ್ಕೇರಿ ಅಣ್ಣನ ಕೊಲೆ ಮಾಡಿ ಆತನ ಮಗನಿಗೆ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ಹೈರಿಗೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ಮಹದೇವೇಗೌಡ (53) ಕೊಲೆಯಾಗಿದ್ದು, ಮೃತನ ಮಗ ಶ್ರೀಕಾಂತ್‌ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರು ಮಕ್ಕಳಿರುವ ಈ ಕುಟುಂಬಕ್ಕೆ ಸುಮಾರು 150ಕ್ಕೂ ಹೆಚ್ಚು ಎಕರೆ ಜಮೀನಿದ್ದರೂ ಕೇವಲ 6 ಎಕರೆ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಜಗಳ ನಡೆದು, ನ್ಯಾಯ ಪಂಚಾಯಿತಿಗಳು ನಡೆಯುತ್ತಿದ್ದವು. ಮೃತ ಮಹದೇವೇಗೌಡರ ಹೆಸರಿನಲ್ಲಿದ್ದ ಆರು ಎಕರೆ ಜಮೀನು ಉಳುಮೆ ಮಾಡುವ ವಿಚಾರದಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ADVERTISEMENT

ಘಟನೆ: ಶನಿವಾರ ಜಮೀನಿನಲ್ಲಿ ಮಹದೇವೇಗೌಡ ಮಗನೊಂದಿಗೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಆಗ ಇವರ ತಮ್ಮ ಗಂಗಾಧರ ಬಂದು ಉಳುಮೆ ಮಾಡದಂತೆ ಅಡ್ಡಿಪಡಿಸಿದ್ದಾನೆ. ಈ ಸಮಯದಲ್ಲಿ ಮಾತಿಗೆ ಮಾತು ನಡೆದು ಘರ್ಷಣೆಗೆ ತಿರುಗಿದೆ. ಆಗ ಗಂಗಾಧರ ತನ್ನೊಂದಿಗೆ ತಂದಿದ್ದ ಚಾಕುವಿನಿಂದ ಇಬ್ಬರಿಗೂ ಇರಿದಿದ್ದಾನೆ, ಅಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಅಕ್ಕಪಕ್ಕದ ಗ್ರಾಮಸ್ಥರು ಇವರ ಗಲಾಟೆಯನ್ನು ಬಿಡಿಸಲು ಬಂದಾಗ, ಕೊಲೆ ಮಾಡಿದ ಗಂಗಾಧರ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯಲ್ಲಿ ಆರೋಪಿ ಗಂಗಾಧರನಿಗೂ ತೀವ್ರಗಾಯಗಳಾಗಿದ್ದರಿಂದ ಪೊಲೀಸರು ವಶಕ್ಕೆ ಪಡೆದ ನಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ನಾಯಕ್‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.