ಮೈಸೂರು: ಶ್ರೀ ಪ್ರಸನ್ನ ವಿದ್ಯಾ ಗಣಪತಿ ಮಂಡಲಿ ಚಾರಿಟಬಲ್ ಟ್ರಸ್ಟ್ (ಎಸ್ಪಿವಿಜಿಎಂಸಿ) ವತಿಯಿಂದ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ಇಲ್ಲಿನ ವಿ.ವಿ ಮೊಹಲ್ಲಾದ 8ನೇ ಅಡ್ಡರಸ್ತೆಯಲ್ಲಿ ನಡೆಯುತ್ತಿರುವ ‘58ನೇ ಪಾರಂಪರಿಕ ಸಂಗೀತೋತ್ಸವ’ದ 10ನೇ ದಿನವಾದ ಬುಧವಾರ ಗಾಯಕ ವಿದ್ವಾನ್ ಸಂದೀಪ್ ನಾರಾಯಣ್ ಅವರು ಗಾಯನದ ಸವಿಯನ್ನು ಪ್ರೇಕ್ಷಕರಿಗೆ ಉಣಬಡಿಸಿದರು.
ನವರಾಗಮಾಲಿಕ ವರ್ಣದಲ್ಲಿ ಅವರು ಗಾಯನ ಆರಂಭಿಸುತ್ತಿದ್ದಂತೆ ಕುರ್ಚಿಗಳು ಭರ್ತಿಯಾಗತೊಡಗಿದವು. ಮೋಹನ ಕಲ್ಯಾಣಿ ರಾಗದಲ್ಲಿ ಅವರು ಹಾಡಿದ ಸಿದ್ಧಿ ವಿನಾಯಕ ಹಾಡಂತೂ ಮನಸೂರೆಗೊಂಡಿತು.
ಕನ್ನಡ ರಾಗದಲ್ಲಿ ಶ್ರೀ ಮಾತೃಭೂತಂ ಹಾಡು, ಭೋಗವಸಂತ ರಾಗದಲ್ಲಿ ಅಂಬೆ ಶ್ರೀ ರಾಜರಾಜೇಶ್ವರಿ ಹಾಡುಗಳು ಎಲ್ಲರು ತಲೆದೂಗುವಂತೆ ಮಾಡುವಲ್ಲಿ ಸಫಲವಾದವು. ಖರಹರಪ್ರಿಯ ರಾಗದಲ್ಲಿ ಚಕ್ಕನಿ ರಾಜಮಾರ್ಗಮು ಹಾಡು, ಕರೆದರೆ ಬರಬಾರದೆ ಹಾಡುಗಳು ಎಲ್ಲರ ಮನಗೆದ್ದವು.
ಇವರಿಗೆ ವಯಲೀನ್ನಲ್ಲಿ ವಿದ್ವಾನ್ ಬಿ.ಯು.ಗಣೇಶ್ಪ್ರಸಾದ್. ಮೃದಂಗದಲ್ಲಿ ಡಾ.ಉಮಯಾಳಪುರಂ ಕೆ.ಶಿವರಾಮನ್, ಘಟದಲ್ಲಿ ವಿದ್ವಾನ್ ಗಿರಿಧರ ಉಡುಪ ಸಾಥ್ ನೀಡಿದರು. ಇದಕ್ಕೂ ಮುನ್ನ ಭೀಷ್ಮ ಶಕ್ತಿ ಭಾಗ–2 ಕಾವ್ಯವಾಚನ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.