ADVERTISEMENT

ಮೈಸೂರು: ಭತ್ತ ಒಣಗಿಸಲು ಹರಸಾಹಸ! ಮಳೆಯಿಂದಾಗಿ ಕೊಯ್ಲು ಅಸ್ತವ್ಯಸ್ತ

ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ

ಆರ್.ಜಿತೇಂದ್ರ
Published 3 ಜುಲೈ 2025, 7:44 IST
Last Updated 3 ಜುಲೈ 2025, 7:44 IST
ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿ ಗ್ರಾಮದ ಮುಖ್ಯರಸ್ತೆಯಲ್ಲಿ ಭತ್ತದ ರಾಶಿ ಹಾಕಿ ಟಾರ್ಪಲ್‌ ಹೊದಿಸಿರುವುದು
ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿ ಗ್ರಾಮದ ಮುಖ್ಯರಸ್ತೆಯಲ್ಲಿ ಭತ್ತದ ರಾಶಿ ಹಾಕಿ ಟಾರ್ಪಲ್‌ ಹೊದಿಸಿರುವುದು   

ಮೈಸೂರು: ಸದ್ಯ ಜಿಲ್ಲೆಯ ವಿವಿಧೆಡೆ ಭತ್ತದ ಕೊಯ್ಲು ನಡೆದಿದ್ದು, ಮಳೆಯ ನಡುವೆ ಉತ್ಪನ್ನ ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಕಳೆದ ಬಾರಿ ಮುಂಗಾರು ಉತ್ತಮವಾಗಿದ್ದ ಕಾರಣಕ್ಕೆ ನಾಲೆಗಳ ಮೂಲಕ ಎರಡನೇ ಬೆಳೆಗೂ ನೀರು ಸಿಕ್ಕಿದ್ದು, ಜಿಲ್ಲೆಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು. ಕಳೆದ ಹದಿನೈದು ದಿನದಿಂದ ಕೊಯ್ಲು ಜೋರಾಗಿ ನಡೆದಿದೆ. ಆದರೆ ಆಗಾಗ್ಗೆ ಮಳೆಯಿಂದಾಗಿ ಭತ್ತ ಹಸಿಯಾಗುವ ಆತಂಕ ರೈತರದ್ದು. ಹೀಗಾಗಿ ಬಿಸಿಲು ಸಿಕ್ಕಾಗಲೆಲ್ಲ ಒಣಗಿಸಿ, ಮಳೆ ಹನಿ ಬಿದ್ದ ಕೂಡಲೇ ಟಾರ್ಪಾಲು ಮುಚ್ಚುವ ಜೂಟಾಟ ನಡೆದಿದೆ. ಕೊಯ್ಲಾದ ಭತ್ತವನ್ನು ರಸ್ತೆಗಳ ಮೇಲೆ ರಾಶಿ ಹಾಕಿ ಒಣಗಿಸಿ ತುಂಬಿಸಲಾಗುತ್ತಿದೆ.

‘ಸದ್ಯ ಭತ್ತದ ಬೆಲೆ ಕುಸಿದಿದ್ದು, ಮುಗ್ಗಲು ಬರದಂತೆ ಕೊಂಚ ಒಣಗಿಸಿ ಸಂಗ್ರಹಿಸಿಟ್ಟುಕೊಂಡು ಉತ್ತಮ ಬೆಲೆ ಸಿಕ್ಕಾಗ ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ಆದರೆ ಮಳೆಯಿಂದಾಗಿ ಉತ್ಪನ್ನ ಒಣಗಿಸಲು ಆಗುತ್ತಿಲ್ಲ. ಹೀಗಾಗಿ ಕೈಗೆ ಸಿಕ್ಕ ಬೆಲೆಗೆ ಮಾರುವುದು ಅನಿವಾರ್ಯ ಆಗಿದೆ’ ಎಂದು ರೈತರು ಹೇಳುತ್ತಾರೆ.

ADVERTISEMENT

ಬೆಲೆ ಕುಸಿತ: ಸದ್ಯ ಭತ್ತದ ಬೆಲೆ ಕುಸಿತ ಕಂಡಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೆಲೆಗಿಂತ (ಕ್ವಿಂಟಲ್‌ಗೆ ₹2300) ಕಡಿಮೆ ದರದಲ್ಲಿ ಮಾರಾಟ ನಡೆದಿದೆ.

ಜಿಲ್ಲೆಯಲ್ಲಿ ಜ್ಯೋತಿ ತಳಿಯ ಭತ್ತವನ್ನು ಅತಿಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ತಳಿಯ ಭತ್ತಕ್ಕೆ ಕ್ವಿಂಟಲ್‌ಗೆ ₹2,200ರ ಸರಾಸರಿ ದರದಲ್ಲಿ ದಲ್ಲಾಳಿಗಳು ರೈತರಿಂದ ಖರೀದಿ ಮಾಡುತ್ತಿದ್ದಾರೆ. ಸಣ್ಣ ತಳಿಯ ಭತ್ತ ₹2 ಸಾವಿರ ದರವಿದೆ. ಕಳೆದ ಮುಂಗಾರಿಗೆ ಹೋಲಿಸಿದರೆ ಕ್ವಿಂಟಲ್‌ಗೆ ಸರಾಸರಿ ₹300–400 ಕಡಿಮೆ ಆಗಿದೆ.

‘2023ರಲ್ಲಿ ಬರದ ಕಾರಣಕ್ಕೆ ಭತ್ತದ ಫಸಲು ಕಡಿಮೆ ಆಗಿದ್ದು, ಪ್ರತಿ ಕ್ವಿಂಟಲ್‌ಗೆ ₹3,200–₹3,400ರವರೆಗೂ ಮಾರಾಟವಾಗಿತ್ತು. ಈ ವರ್ಷ ಮುಂಗಾರಿನಲ್ಲಿ ಜ್ಯೋತಿ ಭತ್ತ ಕ್ವಿಂಟಲ್‌ಗೆ ₹2500 ಇದ್ದದ್ದು, ಈಗ ಇನ್ನಷ್ಟು ಕುಸಿದಿದೆ. ಉತ್ಪಾದನೆಯ ವೆಚ್ಚವೂ ಸಿಗದಂತೆ ಆಗಿದೆ’ ಎಂಬುದು ರೈತರ ಅಳಲು.

ಮಳೆಯಿಂದಾಗಿ ಭತ್ತವನ್ನು ಕೊಯ್ಲು ಮಾಡಿ ಸಂಗ್ರಹಿಸಿಟ್ಟುಕೊಳ್ಳುವುದೇ ಸವಾಲಾಗಿದೆ. ಬೆಲೆಯೂ ಕ್ವಿಂಟಲ್‌ಗೆ ₹300–400 ಕುಸಿದಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ ಮಂಜುನಾಥ್‌ ಭತ್ತದ ಬೆಳೆಗಾರ

ಈ ಮುಂಗಾರಿಗೆ ಅಗತ್ಯವಾದಷ್ಟು ಬಿತ್ತನೆ ಭತ್ತದ ದಾಸ್ತಾನು ಇದೆ. ಕಾಲುವೆಗಳಿಗೆ ನೀರು ಬಿಡುಗಡೆ ದಿನಾಂಕ ಘೋಷಣೆಯಾದ ಬಳಿಕ ವಿತರಣೆಗೆ ಚಾಲನೆ ನೀಡಲಾಗುವುದು ಕೆ.ಎಚ್. ರವಿ ಜಂಟಿ ಕೃಷಿ ನಿರ್ದೇಶಕ

ಬಿತ್ತನೆ ಭತ್ತ ದಾಸ್ತಾನು

ಈ ಬಾರಿ ಕೆಆರ್‌ಎಸ್‌ ಕಬಿನಿ ಜಲಾಶಯಗಳು ವಾಡಿಕೆಯ ಅವಧಿಗೂ ಮುನ್ನವೇ ಭರ್ತಿ ಆಗಿದ್ದು ಈಗಾಗಲೇ ನದಿಗೆ ನೀರು ಹರಿಸಲಾಗುತ್ತಿದೆ. ನಾಲೆಗಳಿಗೆ ಅವಧಿಗೂ ಮುನ್ನವೇ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಭತ್ತದ ಕೃಷಿ ಕೊಂಚ ಮುನ್ನವೇ ಆರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ 86 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಇದೆ. ‘ಜಿಲ್ಲೆಗೆ ಒಟ್ಟು 11 ಸಾವಿರ ಕ್ವಿಂಟಲ್‌ನಷ್ಟು ಬಿತ್ತನೆ ಭತ್ತದ ಅಗತ್ಯ ಇದೆ. ನಮ್ಮಲ್ಲಿ ಜ್ಯೋತಿ ಐಆರ್‌–64 ಎಂಟಿಯು–1001 ಸೇರಿದಂತೆ ಬೇಡಿಕೆ ಇರುವ ತಳಿಗಳ 13 ಸಾವಿರ ಕ್ವಿಂಟಲ್‌ನಷ್ಟು ಬಿತ್ತನೆ ಭತ್ತದ ದಾಸ್ತಾನು ಇದ್ದು ಅಗತ್ಯಕ್ಕಿಂತ ಕೊಂಚ ಹೆಚ್ಚೇ ಸಂಗ್ರಹವಿದೆ. ನೀರಾವರಿ ಸಲಹಾ ಸಮಿತಿಯು (ಐಸಿಸಿ) ಕಾಲುವೆಗಳಿಗೆ ನೀರು ಹರಿಸುವ ದಿನಾಂಕ ಪ್ರಕಟಿಸಿದ ನಂತರ ಬಿತ್ತನೆ ಬೀಜ ವಿತರಣೆ ಆರಂಭ ಆಗಲಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.