ಮೈಸೂರು: ದುಬೈನಿಂದ ಮೈಸೂರಿಗೆ ಬಂದಿದ್ದ 35 ವರ್ಷದ ವ್ಯಕ್ತಿಗೆ ಕೋವಿಡ್–19 ಇರುವುದು ಖಚಿತವಾಗಿದೆ. ಸಾಂಸ್ಕೃತಿಕ ನಗರಿಯಲ್ಲಿ ದೃಢಪಟ್ಟ ಮೊದಲ ಪ್ರಕರಣ ಇದಾಗಿದೆ.
‘ಮೈಸೂರು ನಗರದ ನಿವಾಸಿಯಾಗಿರುವ ವ್ಯಕ್ತಿ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಗೋವಾ ಮಾರ್ಗವಾಗಿ ಮಾರ್ಚ್ 20 ರಂದು ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ಟ್ಯಾಕ್ಸಿಯಲ್ಲಿ ಮಧ್ಯಾಹ್ನದ ವೇಳೆಗೆ ಮೈಸೂರು ತಲುಪಿದ್ದರು. ದುಬೈನಿಂದ ಬರುವಾಗಲೇ ಅಲ್ಪ ಅನಾರೋಗ್ಯ ಇದ್ದ ಕಾರಣ ಮೈಸೂರಿನಲ್ಲಿರುವ ಮನೆಗೆ ತೆರಳದೇ ನೇರವಾಗಿ ಕೆ.ಆರ್.ಆಸ್ಪತ್ರೆಗೆ ಬಂದು ದಾಖಲಾಗಿದ್ದರು’ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಐಸೊಲೇಷನ್ ವಾರ್ಡ್ನಲ್ಲಿ ದಾಖಲಾಗಿದ್ದ ಅವರ ರಕ್ತ ಮತ್ತು ಕಫದ ಮಾದರಿಯನ್ನು ಕೆ.ಆರ್.ಆಸ್ಪತ್ರೆಯಲ್ಲಿರುವ ಲ್ಯಾಬ್ನಲ್ಲಿ ಪರೀಕ್ಷಿಸಲಾಗಿದೆ. ಶನಿವಾರ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ’ ಎಂದರು.
‘ಮೈಸೂರಿಗೆ ಬರುವ ಹಾದಿಯಲ್ಲಿ ಅವರು ಮಂಡ್ಯದಲ್ಲಿ ಒಂದು ಕಡೆ ಚಹಾ ಕುಡಿದಿದ್ದರು. ಅದು ಎಲ್ಲಿ ಎಂಬುದನ್ನು ಪತ್ತೆಹಚ್ಚಿ ಮಂಡ್ಯ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುವುದು. ಆ ವ್ಯಕ್ತಿ ಪ್ರಯಾಣಿಸಿದ್ದ ಟ್ಯಾಕ್ಸಿ ಚಾಲಕನ ಮೊಬೈಲ್ ಸಂಖ್ಯೆ ಲಭಿಸಿದ್ದು, ಅವರಿಗೆ ಕರೆ ಮಾಡಿ ವಿಷಯ ತಿಳಿಸಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.