ADVERTISEMENT

ಅನುಷ್ಠಾನಗೊಳ್ಳದ ಮಾರ್ಗಸೂಚಿ: ಬಡ್ತಿಗೆ ಅಡ್ಡಿ

ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜು ಪ್ರಾಧ್ಯಾಪಕರಿಗಿಲ್ಲ ಪದೋನ್ನತಿ

ಡಿ.ಬಿ, ನಾಗರಾಜ
Published 16 ಸೆಪ್ಟೆಂಬರ್ 2020, 5:44 IST
Last Updated 16 ಸೆಪ್ಟೆಂಬರ್ 2020, 5:44 IST

ಮೈಸೂರು: ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‌ (ಎಐಸಿಟಿಇ) ‘ಕೆರಿಯರ್ ಅಡ್ವಾನ್ಸ್‌ಮೆಂಟ್‌ ಸ್ಕೀಂ’ (ಸಿಎಎಸ್‌) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಪ್ರಕಟಿಸಿ 8 ವರ್ಷ ಗತಿಸಿದರೂ, ರಾಜ್ಯ ಸರ್ಕಾರ ಇದನ್ನು ಜಾರಿಗೊಳಿಸದಿರುವುದರಿಂದ ಸರ್ಕಾರಿ ಹಾಗೂ ಅನುದಾನಿತ ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜುಗಳ ಅಧ್ಯಾಪಕ ವೃಂದ ಮುಂಬಡ್ತಿಯಿಂದ ವಂಚಿತಗೊಂಡಿದೆ.

ಒಂದು ಸಾವಿರಕ್ಕೂ ಹೆಚ್ಚು ಅಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಪದೋನ್ನತಿಯ ಜೊತೆಗೆ ಸಂಬಳದಲ್ಲೂ ಅನ್ಯಾಯಕ್ಕೊಳಗಾಗಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಸಹಾಯಕ ಪ್ರಾಧ್ಯಾಪಕರು, ಸೆಲೆಕ್ಷನ್ ಗ್ರೇಡ್ ಪ್ರಾಧ್ಯಾಪಕರು, ಸೀನಿಯರ್ ಗ್ರೇಡ್ ಪ್ರಾಧ್ಯಾಪಕರು, ಸಂಯೋಜಿತ ಪ್ರಾಧ್ಯಾಪಕರು, ಪ್ರಾಧ್ಯಾಪಕರ ಹುದ್ದೆಗೆ ಪದೋನ್ನತಿಯ ಕನಸು ಕಾಣುತ್ತಿರುವ ಎಂಜಿನಿಯರಿಂಗ್‌, ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಾಪಕ ವೃಂದಕ್ಕೆ, ಸಕಾಲಕ್ಕೆ ಮುಂಬಡ್ತಿ ದೊರಕಿಲ್ಲ.

ADVERTISEMENT

‘ಹಿಂದಿನ ಮಾರ್ಗಸೂಚಿಯಂತೆಯೇ 2015ರ ನವೆಂಬರ್‌ವರೆಗೆ ಮಾತ್ರ ಮುಂಬಡ್ತಿ ನೀಡಿ ಎಂದು ಎಐಸಿಟಿಇ 2016ರಲ್ಲಿ ಹೊರಡಿಸಿದ ಪರಿಷ್ಕೃತ ಸೂಚನೆಯನುಸಾರ ನಮಗೆ ಮುಂಬಡ್ತಿ ದೊರಕಿತು. ಮುಂದಿನ ದಿನಗಳಲ್ಲಿ ಪದೋನ್ನತಿ ನೀಡಬೇಕಾದರೆ 2012ರ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ಆಗಲೇ ಸ್ಪಷ್ಟಪಡಿಸಿದ್ದರಿಂದ, 2017ರಲ್ಲೇ ಸಿಗಬೇಕಿದ್ದ ಮತ್ತೊಂದು ಪದೋನ್ನತಿ ಇದುವರೆಗೆ ಸಿಕ್ಕಿಲ್ಲ’ ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ಮೈಸೂರಿನ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘7ನೇ ವೇತನ ಆಯೋಗದ ಶಿಫಾರಸು ನಮಗೂ ಅಳವಡಿಕೆಯಾಗಿವೆ. ಆದರೆ, ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಅನುಷ್ಠಾನ ಗೊಳಿಸದಿರುವುದರಿಂದ, ಅವರವರ ಸೇವಾ ಜ್ಯೇಷ್ಠತೆ ಆಧಾರದಲ್ಲಿ ಪ್ರತಿಯೊಬ್ಬರಿಗೂ ಕನಿಷ್ಠ ₹ 20 ಸಾವಿರದಿಂದ ಗರಿಷ್ಠ ₹ 60 ಸಾವಿರದವರೆಗೆ ಮಾಸಿಕ ಸಂಬಳದಲ್ಲಿ ವ್ಯತ್ಯಾಸವಾಗುತ್ತಿದೆ’ ಎಂದು ಕಲಬುರ್ಗಿಯ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕರೊಬ್ಬರು ಹೇಳಿದರು.

‘ಪದವಿ ಕಾಲೇಜು ಉಪನ್ಯಾಸಕರಿಗೆ ಈಗಾಗಲೇ ಯುಜಿಸಿ ಶಿಫಾರಸು ಅನುಷ್ಠಾನಗೊಂಡಿವೆ. ಆದರೆ, ನಮಲ್ಲೇ ಇನ್ನೂ ಆಗಿಲ್ಲ. ಇದು ಸರ್ಕಾರವು ತಾರತಮ್ಯ ನೀತಿ ಪ್ರದರ್ಶಿಸಿದೆ’ ಎಂದು ಬಾಗಲಕೋಟೆಯ ಅನುದಾನಿತ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.