ಮೈಸೂರು: ‘ದ್ವೇಷಿಸದೇ ಪರಸ್ಪರ ಪ್ರೀತಿಸಿ. ಜಗತ್ತಿನಲ್ಲಿರೋದು ಮನುಷ್ಯ ಜಾತಿ ಒಂದೇ. ಪ್ರಕೃತಿಯಲ್ಲಿ ಹೆಣ್ಣು–ಗಂಡು ಎರಡನ್ನು ಮಾತ್ರ ದೇವರು ಸೃಷ್ಟಿ ಮಾಡಿದ್ದಾನೆ. ಆದರೆ ನಾವು ಜಾತಿ ಮಾಡಿಕೊಂಡು ಬಡಿದಾಡುತ್ತಿದ್ದೇವೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ವರುಣಾ ವಿಧಾನಸಭಾ ಕ್ಷೇತ್ರದ ಜಂತಗಳ್ಳಿಯಲ್ಲಿ ಶುಕ್ರವಾರ ಲಕ್ಷ್ಮೀದೇವಮ್ಮ ದೇವಸ್ಥಾನದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ‘ಬಸವಣ್ಣನವರು ಎಲ್ಲರನ್ನೂ ಒಂದು ಮಾಡಲು ಪ್ರಯತ್ನಿಸಿದರು. ಇವನಾರವ, ಇವನಾರವ ಎನಿಸದಿರಯ್ಯ. ಇವ ನಮ್ಮವ ಇವ ನಮ್ಮವ ಎನಿಸಯ್ಯ ಕೂಡಲ ಸಂಗಮದೇವ’ ಎಂದರು.
‘ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯ ಏನಾದರೂ ಬಲ್ಲಿರಾ ? ಎಂದು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಗ್ರಾಮಗಳಲ್ಲಿನ ದೇವಸ್ಥಾನಗಳು ಸಮಾಜದಲ್ಲಿನ ಸೌಹಾರ್ದತೆಯನ್ನು ಕಾಪಾಡಲು ಸಹಾಯಕವಾಗಬೇಕು’ ಎಂದು ಅವರು ಹೇಳಿದರು.
‘ಊರಿನವರು ದೇವಸ್ಥಾನಕ್ಕೆ ವಂತಿಕೆ ಹಾಕಿ. ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಯತೀಂದ್ರ ಒಳ್ಳೆಯ ಹುಡುಗ. ಅವನನ್ನು ಚೆನ್ನಾಗಿ ನೋಡಿಕೊಳ್ಳಿ. ಲಕ್ಷ್ಮೀದೇವಮ್ಮ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ’ ಎಂದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಿವೃತ್ತ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಸಿದ್ದರಾಮಯ್ಯ ಮಾಧ್ಯಮ ಸಂಪರ್ಕಾಧಿಕಾರಿ ಕೆ.ವಿ.ಪ್ರಭಾಕರ್, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಮರೀಗೌಡ, ಬಿ.ಎಂ.ರಾಮು, ಬಿ.ಜೆ.ವಿಜಯಕುಮಾರ್, ಮಂಜುಳಾ ಮಂಜುನಾಥ್, ಬುಲೆಟ್ ಮಹದೇವು, ಎಪಿಎಂಸಿ ಸದಸ್ಯ ಬಸವರಾಜು, ನಾಡನಹಳ್ಳಿ ರವಿ, ಹರೀಶ್ ಮೊಗಣ್ಣ, ಜಗದೀಶ್, ಮಹದೇವ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.