ADVERTISEMENT

ಸರ್ಕಾರದ ವಿರುದ್ಧ ಆಕ್ರೋಶ

ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ l ಡಿ.ಸಿ ಅಮಾನತಿಗೆ 10 ದಿನ ಗಡುವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:31 IST
Last Updated 17 ಸೆಪ್ಟೆಂಬರ್ 2021, 4:31 IST
ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರನ್ನು ಉದ್ದೇಶಿಸಿ ವೇದಿಕೆಯ ಕ್ಷೇತ್ರೀಯ ಕಾರ್ಯದರ್ಶಿ ಜಗದೀಶ ಕಾರಂತ ಮಾತನಾಡಿದರು
ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರನ್ನು ಉದ್ದೇಶಿಸಿ ವೇದಿಕೆಯ ಕ್ಷೇತ್ರೀಯ ಕಾರ್ಯದರ್ಶಿ ಜಗದೀಶ ಕಾರಂತ ಮಾತನಾಡಿದರು   

ಮೈಸೂರು: ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದ ದೇಗುಲವನ್ನು ಒಡೆದು ಹಾಕಿದ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು 10 ದಿನಗಳ ಒಳಗೆ ಅಮಾನತುಗೊಳಿಸಬೇಕು ಹಾಗೂ ದೇಗುಲವನ್ನು ಪುನರ್‌ ನಿರ್ಮಿಸಬೇಕು. ಇಲ್ಲದಿದ್ದರೆ, ಮೈಸೂರಿನಿಂದ ಮುಖ್ಯಮಂತ್ರಿ ನಿವಾಸದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯ
ದರ್ಶಿ ಜಗದೀಶ್ ಕಾರಂತ ಗಡುವು ನೀಡಿದರು.

ಇಲ್ಲಿನ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಗುರುವಾರ ದೇಗುಲ ತೆರವು ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ರಸ್ತೆಯಿಂದ 40 ಅಡಿ ದೂರದಲ್ಲಿದ್ದ ದೇಗುಲವನ್ನು ಒಡೆದ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಇಲ್ಲ. ಮುಖ್ಯಕಾರ್ಯದರ್ಶಿಗೂ ಸುಪ್ರೀಂಕೋರ್ಟ್‌ ಆದೇಶವನ್ನು ಸರಿಯಾಗಿ ಓದಲು ಬರುವುದಿಲ್ಲ ಎಂದು ಕಿಡಿಕಾರಿದರು.

ADVERTISEMENT

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ಎಸ್.ಎ.ರಾಮದಾಸ್ ಮುಂದೆಯೇ ಕೆಲವರು ಬಿಜೆಪಿ ಹಾಗೂ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ವೇದಿಕೆಯ ಮೈಸೂರು ವಿಭಾಗದ ಅಧ್ಯಕ್ಷ ಲೋಹಿತ್ ಅರಸ್, ರಾಜ್ಯ ಪ್ರಧಾನ ಕಾರ್ಯ
ದರ್ಶಿ ಉಲ್ಲಾಸ್, ಮಹಾದೇವಮ್ಮ ದೇಗುಲ ಧರ್ಮಾಧಿಕಾರಿ ನರಸಿಂಹೇಗೌಡ, ಮೇಯರ್ ಸುನಂದಾಪಾಲನೇತ್ರ, ‘ಮುಡಾ’ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡರಾದ ಗಿರಿಧರ್, ರವಿಕುಮಾರ್, ಮೈ.ಕಾ.ಪ್ರೇಮ್ ಕುಮಾರ್ ಇದ್ದರು.

ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಮನವಿ ಸ್ವೀಕರಿಸಿದರು.

‘ದಿ ಡೈಲಿ ಕೌಸರ್’ ವರದಿಗಾರನ ಮೇಲೆ ಹಲ್ಲೆ: ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ವಿರೋಧಿಸಿ ಗುರುವಾರ ಇಲ್ಲಿನ ಕೋಟೆ ಆಂಜನೇಯಸ್ವಾಮಿ ಗುಡಿ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ ಏರ್ಪಡಿಸಿದ್ದ ಪ್ರತಿಭಟನಾ ಸಭೆಯ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ‘ದಿ ಡೈಲಿ ಕೌಸರ್’ ದಿನಪತ್ರಿಕೆಯ ವರದಿಗಾರ ಮಹಮ್ಮದ್ ಸಫ್ಜರ್ ಕೈಸರ್ ಅವರ ಮೇಲೆ ಕೆಲವು ಕಾರ್ಯಕರ್ತರು ಹಲ್ಲೆ ನಡೆಸಿದರು.

‘ಪತ್ರಕರ್ತರ ಗುರುತಿನ ಚೀಟಿ ತೋರಿಸುವಂತೆ ಕಾರ್ಯಕರ್ತರು ಕೇಳಿದ್ದಕ್ಕೆ ಕೈಸರ್‌ ಆಕ್ಷೇಪಿಸಿದರು. ಆ ವೇಳೆ ಮಾತಿನ ಚಕಮಕಿ ಜೊತೆಗೆ ತಳ್ಳಾಟವೂ ನಡೆಯಿತು. ಆಗ ಕೆಲವರು ಕೈಸರ್‌ ಅವರ ಮೇಲೆ ಹಲ್ಲೆ ನಡೆಸಿದರು. ಮೊಬೈ‌ಲ್ ಫೋನ್ ಕಸಿದು, ಸಮೀಪದ ಕಚೇರಿಯೊಂದಕ್ಕೆ ಎಳೆದೊಯ್ಯಲು ಯತ್ನಿಸಿದರು. ಅದನ್ನು ತಡೆಯಲು ಬಂದ ಪೊಲೀಸ್‌ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾದವು.

ಪೊಲೀಸರು ಸಹ ಗುರುತಿನ ಚೀಟಿ ತೋರಿಸುವಂತೆ ಕೈಸರ್‌ ಅವರನ್ನು ಕೇಳಿದರು. ಆಗ ಸ್ಥಳದಲ್ಲಿದ್ದ ಪತ್ರಕರ್ತರು ಜಿಲ್ಲಾ ಪತ್ರಕರ್ತರ ಸಂಘದಿಂದ ಕೈಸರ್ ಅವರ ಗುರುತಿನ ಚೀಟಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ತರಿಸಿಕೊಂಡು ತೋರಿಸಿದರು. ನಂತರ, ಪರಿಸ್ಥಿತಿ ತಿಳಿಯಾಯಿತು. ಘಟನೆಯನ್ನು ಜಿಲ್ಲಾ ಪತ್ರಕರ್ತರ ಸಂಘವು ಖಂಡಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದೆ.

ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.