ADVERTISEMENT

ಠಾಣೆ ಎದುರು ಶವವಿಟ್ಟು ಪ್ರತಿಭಟನೆ

ಪಿರಿಯಾಪಟ್ಟಣ: ಕುಶಲಕರ್ಮಿ ಯೋಗೇಶ್‌ ಸಾವಿನ ತನಿಖೆಗೆ ಸಂಬಂಧಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 2:48 IST
Last Updated 20 ಅಕ್ಟೋಬರ್ 2019, 2:48 IST
ಪುನಾಡಹಳ್ಳಿ ಗ್ರಾಮದ ಯೋಗೇಶ್ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಮೃತನ ಸಂಬಂಧಿಕರು ಪಿರಿಯಾಪಟ್ಟಣ ಸಿಪಿಐ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು
ಪುನಾಡಹಳ್ಳಿ ಗ್ರಾಮದ ಯೋಗೇಶ್ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಮೃತನ ಸಂಬಂಧಿಕರು ಪಿರಿಯಾಪಟ್ಟಣ ಸಿಪಿಐ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು   

ಪಿರಿಯಾಪಟ್ಟಣ: ಕುಶಲಕರ್ಮಿ ಯೋಗೇಶ್ ಸಾವು ಆಕಸ್ಮಿಕವಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಪಟ್ಟಣದ ಪೊಲೀಸ್ ಠಾಣೆ ಮುಂಭಾಗ ಶನಿವಾರ ಮೃತನ ಸಂಬಂಧಿಕರು ಶವವಿಟ್ಟು ಪ್ರತಿಭಟನೆ
ನಡೆಸಿದರು.

ಘಟನೆ ವಿವರ: ತಾಲ್ಲೂಕಿನ ಪುನಾಡಹಳ್ಳಿ ಗ್ರಾಮದ ಕುಶಲಕರ್ಮಿ ಯೋಗೇಶ್ ತಿರುಮಲಾಪುರ ಗ್ರಾಮದ ಮೋಹನ್ ಎಂಬುವವರ ಮನೆಯಲ್ಲಿ ಶುಕ್ರವಾರ ಬಾಗಿಲು ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಕರಕ್ಕೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೆ ಸಾವನ್ನಪಿದ್ದರು.

ಘಟನೆ ಸಂಬಂಧ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ADVERTISEMENT

ಶನಿವಾರ ಬೆಳಿಗ್ಗೆ ಮೃತನ ಸಂಬಂಧಿಕರು ಮತ್ತು ಮೋಹನ್ ಸಂಬಂಧಿಕರ ನಡುವೆ ಪರಿಹಾರಕ್ಕೆ ಸಂಬಂಧಿಸಿದಂತೆ ನಡೆದ ಸಂಧಾನ ವಿಫಲವಾಗಿದ್ದರಿಂದ ಮೃತನ ಸಂಬಂಧಿಕರು ಪಟ್ಟಣದ ಸಿಪಿಐ ಕಚೇರಿ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಿಪಿಐ ಬಿ.ಆರ್.ಪ್ರದೀಪ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ‘ಕೊಲೆ ಸಂಬಂಧ ಈಗಾಗಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಕೊಲೆಯೋ ಅಥವಾ ಸಹಜ ಸಾವೋ ಎಂಬುದು ಗೊತ್ತಾಗಲಿದೆ. ಕೊಲೆಯಾಗಿದ್ದರೆ ಆರೋ‍‍ಪಿಗಳನ್ನು ಬಂಧಿಸಲಾಗುವುದು’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.