ADVERTISEMENT

ದರ ಏರಿಕೆ ವಿರುದ್ಧ ಸಿಪಿಐ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಮುಂದೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 4:50 IST
Last Updated 26 ಜೂನ್ 2021, 4:50 IST
ಹೆಚ್ಚುತ್ತಿರುವ ದರ ಏರಿಕೆ ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು
ಹೆಚ್ಚುತ್ತಿರುವ ದರ ಏರಿಕೆ ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು   

ಮೈಸೂರು: ಹೆಚ್ಚುತ್ತಿರುವ ದರ ಏರಿಕೆ ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಒಂದು ಕಡೆ ಕೊರೊನಾ ಸಂಕಷ್ಟ ಮತ್ತೊಂದು ಕಡೆ ಲಾಕ್‌ಡೌನ್‌ ಹೇರಿಕೆಯಿಂದ ಜನಸಾಮಾನ್ಯರು ನರಳುತ್ತಿರುವಾಗ ಅಗತ್ಯ ವಸ್ತುಗಳ ದರ ಏರಿಕೆ ನಿರಂತರವಾಗಿ ಸಾಗಿದೆ. ಈ ಮೂಲಕ ಜನರ ಬದುಕು ಇನ್ನಷ್ಟು ಅಸಹನೀಯಗೊಂಡಿದೆ. ಇದನ್ನೆಲ್ಲ ಕಂಡೂ ಕಾಣದಂತೆ ಸರ್ಕಾರ ಕುಳಿತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ವಿದ್ಯುತ್‌ ದರವನ್ನು ಶೇ 30ರಷ್ಟು ಹೆಚ್ಚು ಮಾಡಿರುವುದು ಎಲ್ಲರ ಮೇಲೂ ಬರೆ ಎಳೆದಂತಾಗಿದೆ. ನಿತ್ಯೋಪಯೋಗಿ ವಸ್ತುಗಳಾದ ಅಡುಗೆ ಎಣ್ಣೆ, ಬೇಳೆಕಾಳುಗಳು ಮತ್ತು ಇಂಧನ ಬೆಲೆಗಳು ಏರಿಕೆಯಾಗಿ ಜನಸಾಮಾನ್ಯರು ತತ್ತರಿಸಿದ್ದಾರೆ ಎಂದು ಅವರು ಕಿಡಿಕಾರಿದರು.‌

ADVERTISEMENT

ಸರ್ಕಾರ ಕೂಡಲೇ ಇಂಧನ ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು, ಅಡುಗೆ ಎಣ್ಣೆ, ತರಕಾರಿ, ಬೇಳೆಕಾಳುಗಳ ಬೆಲೆಗಳನ್ನು ಇಳಿಕೆ ಮಾಡಬೇಕು, ವಿದ್ಯುತ್ ದರ ಏರಿಕೆಯನ್ನು ವಾಪಸ್ ಪಡೆಯಬೇಕು, ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಉದ್ಯೋಗ ಖಾತರಿ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಿ, ನಗರ ಪ್ರದೇಶಗಳಿಗೂ ವಿಸ್ತರಿಸಬೇಕು, ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳೂ ₹ 10 ಸಾವಿರ ನೀಡಬೇಕು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೇಸರೀಕರಣ ತಡೆಗಟ್ಟಬೇಕು ಎಂದು ಅವರು ಆಗ್ರಹಿಸಿದರು.

ಬಿತ್ತನೆ ಬೀಜದ ಕೊರತೆಯನ್ನು ನೀಗಿಸಬೇಕು, ಶಿಕ್ಷಣದ ವ್ಯಾಪಾರೀಕರಣ, ಖಾಸಗೀಕರಣವನ್ನು ಕೂಡಲೇ ತಡೆಗಟ್ಟಬೇಕು, ಖಾಸಗಿ ಶಾಲಾ, ಕಾಲೇಜುಗಳ ಶುಲ್ಕ ವಸೂಲಾತಿಯನ್ನು ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರತಿಭಟನಕಾರರು ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಸಿಪಿಐನ ಎಚ್.ಆರ್.ಶೇಷಾದ್ರಿ, ಸಹ ಕಾರ್ಯದರ್ಶಿ ಎಚ್.ಬಿ.ರಾಮಕೃಷ್ಣ, ಎಐಟಿಯುಸಿಯ ಅಧ್ಯಕ್ಷ ಎನ್.ಕೆ.ದೇವದಾಸ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.