ADVERTISEMENT

ಯುಜಿಸಿಯಿಂದ ದಲಿತ ವಿರೋಧಿ ನೀತಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 12:26 IST
Last Updated 11 ಜನವರಿ 2019, 12:26 IST
ಯುಜಿಸಿಯಿಂದ ದಲಿತ ವಿರೋಧಿ ನೀತಿ ಅಳವಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಮೈಸೂರು ವಿ.ವಿ ಸಂಶೋಧಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು
ಯುಜಿಸಿಯಿಂದ ದಲಿತ ವಿರೋಧಿ ನೀತಿ ಅಳವಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಮೈಸೂರು ವಿ.ವಿ ಸಂಶೋಧಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು   

ಮೈಸೂರು: ಯುಜಿಸಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ದಲಿತ ವಿರೋಧಿ ನೀತಿಗಳನ್ನು ಅಳವಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿ ಮೈಸೂರು ವಿ.ವಿ ಸಂಶೋಧಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಎದುರು ಶುಕ್ರವಾರ ಸೇರಿದ ಸಂಶೋಧನಾ ವಿದ್ಯಾರ್ಥಿಗಳು, ಯುಜಿಸಿಯ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ತರುವ ಮೂಲಕ ದಲಿತರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ. ದಲಿತ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗಲಿದೆ ಎಂದು ಆರೋ‍ಪಿಸಿ ಧಿಕ್ಕಾರ ಕೂಗಿದರು.‌

ರಾಷ್ಟ್ರೀಯ ಶಿಷ್ಯವೇತನಗಳಾದ ಮೌಲಾನಾ ಆಜಾದ್, ರಾಷ್ಟ್ರೀಯ ಶಿಷ್ಯವೇತನ, ರಾಷ್ಟ್ರೀಯ ಶಿಷ್ಯವೇತನ ಎಸ್ಸಿ, ಎಸ್ಟಿ ಶಿಷ್ಯವೇತನಗಳಿಗೆ ಸಂಶೋಧನಾ ವಿದ್ಯಾರ್ಥಿಗಳು ಅರ್ಜಿ ಹಾಕಬೇಕಾದರೆ ‘ಎನ್‌ಇಟಿ’ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಅರ್ಜಿ ಹಾಕಬೇಕೆಂಬ ವಿದ್ಯಾರ್ಥಿ ವಿರೋಧಿ ನಿಯಮವನ್ನು ರೂಪಿಸಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಎನ್‌ಇಟಿ ಪರೀಕ್ಷೆಯನ್ನು ಯುಪಿಎಸ್‌ಸಿ ಮಾದರಿಯಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿಕೊಡಬೇಕು. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಟ್ಟಂತೆ ಆಗುವುದು. ಎನ್‌ಇಟಿ ಉತ್ತೀರ್ಣರಾಗಬೇಕು ಎಂಬ ಕಾರಣ ನೀಡಿ ಹಲವು ತಿಂಗಳಿಂದ ನೀಡದೇ ಇರುವ ಶಿಷ್ಯವೇತನವನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಎಸ್‌.ಗೋಪಾಲ್, ನಾಗೇಂದ್ರ, ಡಿ.ಮಹದೇವಸ್ವಾಮಿ ಮಂಗಲ, ಬಿ.ಎಲ್.ರಘು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.