ನಂಜನಗೂಡು: ತಾಲ್ಲೂಕಿನ ದೇವರಸನಹಳ್ಳಿ, ಹೊರಳವಾಡಿ, ಬದನವಾಳು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ನಗರದ 31 ವಾರ್ಡ್ನಲ್ಲಿ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ ಮಂಗಳವಾರ ಮತಯಾಚನೆ ಮಾಡಿದರು.
ದೇವರಸನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ‘ಬಿಜೆಪಿಯವರು ನರೇಂದ್ರ ಮೋದಿಯನ್ನು ನೋಡಿ ಮತ ಕೊಡಿ ಎನ್ನುತ್ತಿದ್ದಾರೆ. ಅಪ್ಪನನ್ನು ನೋಡಿ ಮಗನಿಗೆ ಹೆಣ್ಣು ಕೊಡಲು ಸಾಧ್ಯವೇ? ದುಡಿಯುವ ಎತ್ತಿಗೆ ಹುಲ್ಲು ಹಾಕಬೇಕು, ಕ್ಷೇತ್ರದ ಅಭಿವೃದ್ಧಿಗಾಗಿ ಸದಾಕಾಲ ತುಡಿಯುವ ಧ್ರುವನಾರಾಯಣ ಅವರಿಗೆ ಬೆಂಬಲ ನೀಡಬೇಕಿದೆ. ತಪ್ಪು ನಿರ್ಧಾರ ತೆಗೆದುಕೊಂಡು ಮುಂದೆ ವ್ಯಥೆ ಪಡುವುದು ಬೇಡ. ಸಲ್ಲದ ಆಸೆ ತೋರಿಸಿ, ಗಿಮಿಕ್ ಮಾಡಿ ಮತ ಪಡೆದವರು ಕೈಗೆ ಸಿಗುವುದಿಲ್ಲ. ಈ ಹಿಂದೆ ಕ್ಷೇತ್ರದ ಜನಕ್ಕೆ ಇದರ ಅರಿವಾಗಿದೆ’ ಎಂದರು.
ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ‘ನನಗೆ ದ್ವೇಷ ರಾಜಕಾರಣ ಒಗ್ಗುವುದಿಲ್ಲ. ಯಾರನ್ನೂ ಸೋಲಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿಲ್ಲ. ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯ, ಆದರ್ಶ ಶಾಲೆ, ಮೊರಾರ್ಜಿ ವಸತಿ ಶಾಲೆ, ಹೆರಿಗೆ ಆಸ್ಪತ್ರೆ, ಇ.ಎಸ್.ಐ ಆಸ್ಪತ್ರೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮತ್ತೊಮ್ಮೆ ಅವಕಾಶ ನೀಡಿ’ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಕಾಗಲವಾಡಿ ಶಿವಣ್ಣ, ಜಿ.ಪಂ ಸದಸ್ಯೆ ಲತಾ ಸಿದ್ದಶೆಟ್ಟಿ,
ಕಳಲೆ ಕೇಶವಮೂರ್ತಿ, ಎಸ್.ಸಿ. ಬಸವರಾಜು, ಇಂಧನ್ ಬಾಬು, ಗಿರೀಶ್, ಅಕ್ಬರ್ ಅಲೀಂ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಮೂಗಶೆಟ್ಟಿ, ನಾಗೇಶ್ ರಾಜ್, ಡಿ.ಎಂ.ರಾಜು, ಚಿನ್ನದಗುಡಿ ಹುಂಡಿ ನಾಗರಾಜ್, ವಿಜಯ್ ಕುಮಾರ್ ಹಾಗೂ ಮರಿದಾಸ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.