ಮೈಸೂರು: ನಗರದಲ್ಲಿ ಸೋಮವಾರ ರಾತ್ರಿ 53 ಮಿ.ಮೀ ಮಳೆ ಸುರಿಯಿತು. ಗುಡುಗು, ಸಿಡಿಲಿನಿಂದ ಕೂಡಿದ ಮಳೆಯು ಬಿಸಿಲ ಬೇಗೆಯಿಂದ ಬಸವಳಿದಿದ್ದ ಇಳೆಯನ್ನು ತಂಪಾಗಿಸಿತು.
ಮೈಸೂರು ಹಾಗೂ ಕೆ.ಆರ್.ನಗರ ತಾಲ್ಲೂಕಿನ ಗ್ರಾಮಗಳಲ್ಲಿಯೂ ಧಾರಾಕಾರ ಮಳೆಯಾಗಿದೆ. ಯುಗಾದಿ ನಂತರ ಬಿದ್ದಿರುವ ಮಳೆಯು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಲು ರೈತರಿಗೆ ನೆರವಾಗಿದೆ. ಬಿಸಿಲಿನಿಂದ ಬಾಡುತ್ತಿದ್ದ ತರಕಾರಿ ಬೆಳೆಗಳಿಗೆ ಜೀವ ತುಂಬಿದೆ.
ಮೈಸೂರು ನಗರದಲ್ಲಿ 53 ಮಿ.ಮೀ, ನಾಗನಹಳ್ಳಿಯಲ್ಲಿ 43 ಮಿ.ಮೀ, ಸಿದ್ದಲಿಂಗಪುರದಲ್ಲಿ 42 ಮಿ.ಮೀ, ಕೆ.ಆರ್.ನಗರದ ಡೋರನಹಳ್ಳಿಯಲ್ಲಿ 15 ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ದೇ.ಜವರೇಗೌಡ ಉದ್ಯಾನದ ಬಳಿ, ಉದಯಗಿರಿಯ ಬಿನ್ನರ್ ಮಿಲ್ ಸಮೀಪ ಮರಗಳು ಧರೆಗುರುಳಿವೆ. ಬನ್ನಿಮಂಟಪದ ಹನುಮಂತನಗರ, ನಾಯ್ಡುನಗರದ ಬಸ್ನಿಲ್ದಾಣ, ಎಂ.ಜಿ.ರಸ್ತೆಯ ಮಧುವನ, ಸ್ಕೌಟ್ ಮತ್ತು ಗೈಡ್ಸ್ ಮೈದಾನ ಹಾಗೂ ತಿ.ನರಸೀಪುರ ಚೆಕ್ಪೋಸ್ಟ್ಗೆ ನೀರು ನುಗಿದೆ. ಪಾಲಿಕೆಯ 3 ಅಭಯ್ ರಕ್ಷಣಾ ತಂಡಗಳು ನೀರನ್ನು ಹೊರ ಹಾಕುವ ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.