ಬೆಟ್ಟದಪುರ: ಪಡಿತರ ಪೂರೈಕೆ ನೀಡದಿರುವುದನ್ನು ಖಂಡಿಸಿ ಸಮೀಪದ ದೊಡ್ಡೇಗೌಡನಕೊಪ್ಪಲು, ನಾಗನಹಳ್ಳಿ ಹಾಗೂ ನಾಗನಹಳ್ಳಿ ಪಾಳ್ಯ ಗ್ರಾಮಸ್ಥರು ಬೆಟ್ಟದತುಂಗ ನ್ಯಾಯಬೆಲೆ ಅಂಗಡಿ ಎದುರು ಪ್ರತಿಭಟನೆ ನಡೆಸಿದರು.
ಮೂರು ಗ್ರಾಮಗಳ 244 ಬಿಪಿಎಲ್ ಕುಟುಂಬಗಳಿಗೆ ಈ ಹಿಂದೆ, ಬೆಟ್ಟದತುಂಗ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ನೀಡಲಾಗುತ್ತಿತ್ತು. ಆದರೆ, ಈ ಗ್ರಾಮಕ್ಕೆ 4 ಕಿ.ಮೀ. ಸಂಚರಿಸಬೇಕಿತ್ತು. ಹೀಗಾಗಿ, ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ನೂತನ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದರು. ದೊಡ್ಡೇಗೌಡನ ಕೊಪ್ಪಲು ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿಯನ್ನು ಸ್ಥಾಪಿಸಿ ಪಡಿತರ ವಿತರಿಸಲಾಗಿತ್ತು. ಆದರೆ, ಈ ತಿಂಗಳ ಪಡಿತರವನ್ನು ದೊಡ್ಡೇಗೌಡನ ಕೊಪ್ಪಲು ಬದಲಿಗೆ ಬೆಟ್ಟದತುಂಗ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಪೂರೈಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸ್ಥಳಕ್ಕೆ ತಾಲ್ಲೂಕು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿ ಸಣ್ಣಸ್ವಾಮಿ ಭೇಟಿ ನೀಡಿ ಅಹವಾಲು ಆಲಿಸಿದರು.
ತಾಂತ್ರಿಕ ದೋಷದಿಂದ ಹೆಬ್ಬೆಟ್ಟು ಗುರುತಿಸುವಿಕೆ ಸಾಧ್ಯವಾಗಿಲ್ಲ. ಹೀಗಾಗಿ, ಈ ಮೂರು ಗ್ರಾಮಗಳ ಬಿಪಿಎಲ್ ಕುಟುಂಬಗಳಿಗೆ ಪಡಿತರ ವಿತರಿಸಿಲ್ಲ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲಾಗುತ್ತದೆ ಎಂದು ಸಣ್ಣಸ್ವಾಮಿ ಹೇಳಿದರು.
ನೂತನ ನ್ಯಾಯಬೆಲೆ ಅಂಗಡಿ ಪುನಃ ಆರಂಭಿಸುವಂತೆ ತಹಶೀಲ್ದಾರರಿಗೆ ಮನವಿ ನೀಡುವಂತೆ ಗ್ರಾಮಸ್ಥರಿಗೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.