ADVERTISEMENT

ಖಾದಿ ಗ್ರಾಮೋದ್ಯೋಗ ಪುನಶ್ಚೇತನಗೊಳಿಸಿ; ಎನ್.ಆರ್.ಕೃಷ್ಣಪ್ಪಗೌಡ ಸೂಚನೆ

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 3:52 IST
Last Updated 17 ಫೆಬ್ರುವರಿ 2021, 3:52 IST
ನಂಜನಗೂಡಿನ ರಾಜಾಜಿ ಕಾಲೊನಿಯ ಖಾದಿ ಮಂಡಳಿಗೆ ಸೇರಿದ ಖಾದಿ ಬಟ್ಟೆಗಳಿಗೆ ಬಣ್ಣ ಹಾಕುವ ಕೇಂದ್ರಕ್ಕೆ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಡಳಿಯ ಸಿಇಒ ಜಯವಿಭವಸ್ವಾಮಿ ಇದ್ದಾರೆ
ನಂಜನಗೂಡಿನ ರಾಜಾಜಿ ಕಾಲೊನಿಯ ಖಾದಿ ಮಂಡಳಿಗೆ ಸೇರಿದ ಖಾದಿ ಬಟ್ಟೆಗಳಿಗೆ ಬಣ್ಣ ಹಾಕುವ ಕೇಂದ್ರಕ್ಕೆ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಡಳಿಯ ಸಿಇಒ ಜಯವಿಭವಸ್ವಾಮಿ ಇದ್ದಾರೆ   

ನಂಜನಗೂಡು: ‘ಖಾದಿ ಉದ್ಯಮಕ್ಕೆ ಹೆಸರುವಾಸಿಯಾಗಿದ್ದ ನಂಜನಗೂಡನ್ನು ಮತ್ತೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವಂತೆ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ರಾಜಾಜಿ ಕಾಲೊನಿಯ ಖಾದಿ ಮಂಡಳಿಯ ಡೈಯಿಂಗ್ ಘಟಕಕ್ಕೆ ಮಂಗಳವಾರ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯವಿಭವಸ್ವಾಮಿ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದರು.

‘ಹಲವು ವರ್ಷಗಳ ಹಿಂದೆ ಖಾದಿ ಬಟ್ಟೆಗಳಿಗೆ ಬಣ್ಣ ಹಾಕುವ ಕೇಂದ್ರವಿದ್ದ ರಾಜಾಜಿ ಕಾಲೊನಿಯಲ್ಲಿದ್ದ ಕೇಂದ್ರವನ್ನು ಮುಚ್ಚಿ ಬದನವಾಳು ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಮಂಡಳಿಗೆ ಸೇರಿದ ಈ ಜಾಗದಲ್ಲಿ ಮತ್ತೆ ಖಾದಿ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟಕ್ಕೆ ಪುನಶ್ಚೇತನಗೊಳಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆಗೆ ಆಗಮಿಸಿರುವುದಾಗಿ’ ತಿಳಿಸಿದರು.

ADVERTISEMENT

ನಗರದಲ್ಲಿ ಖಾದಿ ಉತ್ಪನ್ನಗಳ ಮಾರಾಟ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಸಂಘ ಸಂಸ್ಥೆಗಳು ಮಾರಾಟ ಮಳಿಗೆ ಉಸ್ತುವಾರಿ ವಹಿಸಲು ಮುಂದೆ ಬಂದರೆ ಮಂಡಳಿಯಿಂದ ₹ 10 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಹೇಳಿದರು.

‘ಖಾದಿ ಮಂಡಳಿಗೆ ಸೇರಿದ ಶಿಥಿಲಾವಸ್ಥೆಯಲ್ಲಿರುವ ಡೈಯಿಂಗ್ ಹೌಸ್, ಕ್ವಾರ್ಟಸ್, ನರಸಣ್ಣ ಅಗ್ರಹಾರ ದಲ್ಲಿರುವ ಕಟ್ಟಡಗಳ ಪುನಶ್ಚೇತನ ಗೊಳಿಸುವ ಉದ್ದೇಶದಿಂದ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗು ವುದು. ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವುದು ನಮ್ಮ ಗುರಿ’ ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯಕಾರ್ಯನಿರ್ವಹಣಾ ಧಿಕಾರಿ ಜಯವಿಭವಸ್ವಾಮಿ ಮಾತನಾಡಿ, ಮಂಡಳಿ ಅಧ್ಯಕ್ಷರಾದ ಎನ್.ಆರ್.ಕೃಷ್ಣಪ್ಪಗೌಡ ಸರ್ಕಾರದಿಂದ ಮಂಡಳಿಗೆ ಬರಬೇಕಾದ 150 ಕೋಟಿ ಬ್ಯಾಕ್‍ಲಾಗ್‌ ಅನುದಾನ ಪಡೆಯುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಖಾದಿ ಗ್ರಾಮೋದ್ಯಮದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅನುದಾನ ಬಳಸಿ ದುಸ್ಥಿತಿಯಲ್ಲಿರುವ ಖಾದಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ನಗರಸಭಾ ಸದಸ್ಯ ಕಪಿಲೇಶ್ ಹಾಗೂ ಮಂಡಳಿಯ ಸಿಬ್ಬಂದಿ ಇದ್ದರು.

‘ಸಾಬರಮತಿ ಮಾದರಿಯಲ್ಲಿ ಬದನವಾಳು ಅಭಿವೃದ್ಧಿ’

‘ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಗುಜರಾತಿನ ಸಾಬರಮತಿ ಆಶ್ರಮದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ ಹೇಳಿದರು.

‘6 ಎಕರೆ ವಿಸ್ತೀರ್ಣದಲ್ಲಿರುವ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ₹ 1 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ’ ಎಂದು ಮಂಗಳವಾರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.