ADVERTISEMENT

ವರ್ತುಲ ರಸ್ತೆಗೆ ದೀಪ: ಗಡುವು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 15:58 IST
Last Updated 4 ಫೆಬ್ರುವರಿ 2023, 15:58 IST
ಮೈಸೂರು ಮಹಾನಗರ ಪಾಲಿಕೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ಮಾತನಾಡಿದರು. ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ, ಉಪ ಆಯುಕ್ತೆ ಜಿ.ರೂಪಾ, ಎಂ.ಮಹೇಶ್ ಇದ್ದಾರೆ
ಮೈಸೂರು ಮಹಾನಗರ ಪಾಲಿಕೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ಮಾತನಾಡಿದರು. ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ, ಉಪ ಆಯುಕ್ತೆ ಜಿ.ರೂಪಾ, ಎಂ.ಮಹೇಶ್ ಇದ್ದಾರೆ   

ಮೈಸೂರು: ‘ನಗರದ ವರ್ತುಲ ರಸ್ತೆಯ ಬೀದಿ ದೀಪ ಅಳವಡಿಕೆ ಕಾಮಗಾರಿಯನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಬೇಕು’ ಎಂದು ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ತಿಂಗಳ ನಂತರ ವಿಧಾನಸಭಾ ಚುನಾವಣೆಯ ಚಟುವಟಿಕೆಗಳು ಪ್ರಾರಂಭವಾಗುವ ನಿರೀಕ್ಷೆ ಇದೆ. ಆಗ, ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಬೇಕಾಗುತ್ತದೆ. ಹೀಗಾಗಿ, ಅಷ್ಟರೊಳಗೆ ವರ್ತುಲ ರಸ್ತೆಯಲ್ಲಿ ಬಾಕಿ ಇರುವ ಬೀದಿ ದೀಪ ಅಳವಡಿಕೆ ಕಾಮಗಾರಿ ಮುಗಿಸಬೇಕು’ ಎಂದು ತಿಳಿಸಿದರು.

ನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ‘ವಿದ್ಯುತ್ ದೀಪಗಳನ್ನು ಆನ್ ಮತ್ತು ಆಫ್ ಮಾಡಲು ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ (ಸಿಸಿಎಂಎಸ್)ಯನ್ನು 90 ಕಡೆಗಳಲ್ಲಿ ಅಳವಡಿಸುವ ಗುರಿ ಇದ್ದು, ಈಗಾಗಲೇ 70 ಕಡೆಗಳಲ್ಲಿ ಮುಗಿದಿದೆ. ಕೆಲವೇ ದಿನಗಳಲ್ಲಿ ಎಲ್ಲ ಕಡೆಯೂ ಆಗಲಿದೆ. 20 ಕಡೆಗಳಲ್ಲಿ ಹೈಮಾಸ್ಟ್‌ ವಿದ್ಯುದ್ದೀಪಗಳನ್ನು ಅಳವಡಿಸಲಾಗುವುದು’ ಎಂದರು.

ADVERTISEMENT

‘ಕೇಬಲ್ ಅಳವಡಿಕೆ ಕಾರ್ಯ ಶೇ 99ರಷ್ಟು ಮುಗಿದಿದೆ. 4,300 ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಈ ಪೈಕಿ 4,236 ಬಲ್ಬ್‌ಗಳನ್ನು ಹಾಕಲಾಗಿದೆ. 60 ಮಿನಿ ಹೈಮಾಸ್ಟ್‌ ದೀಪ ಅಳವಡಿಕೆ ಬಾಕಿ ಇದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.