ಮೈಸೂರು: ‘ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾ ಅಂಗವಾಗಿ ಸೆ.30ರಂದು ಸಂಜೆ 7.30ರಿಂದ ‘ಸ್ಯಾಂಡಲ್ವುಡ್ ನೈಟ್’ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದ್ದು, ನಟ ಉಪೇಂದ್ರ ಸೇರಿದಂತೆ ಹಲವು ಕಲಾವಿದರು ರಂಜಿಸಲಿದ್ದಾರೆ’ ಎಂದು ಯುವ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ ಆರ್.ಚೇತನ್ ತಿಳಿಸಿದರು.
ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಪ್ರಚಾರ ಸಾಮಗ್ರಿಗಳನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನಟರಾದ ರಿಷಬ್ ಶೆಟ್ಟಿ, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ಪ್ರಮೋದ್ ಶೆಟ್ಟಿ, ಸಪ್ತಮಿ ಗೌಡ, ಧನ್ವೀರ್ ಗೌಡ, ಪ್ರಜ್ವಲ್ ದೇವರಾಜ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಲನಚಿತ್ರ ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ದೀರನ್ ರಾಮ್ಕುಮಾರ್, ನಿಧಿ ಸುಬ್ಬಯ್ಯ, ಕೃಷಿ ತಾಪಂಡ, ಸೋನು ಗೌಡ ಹಾಗೂ ಹರ್ಷಿಕಾ ಪೂಣಚ್ಚ ನೃತ್ಯ ಪ್ರದರ್ಶಿಸಲಿದ್ದಾರೆ. ನಿಶ್ಚಿಕಾ ನಾಯ್ಡು, ಮಿಲನಾ ನಾಗರಾಜ್, ‘ಡಾರ್ಲಿಂಗ್’ ಕೃಷ್ಣ, ಅಮೃತಾ ಅಯ್ಯಂಗಾರ್, ಮಾನ್ವಿತಾ ಹರೀಶ್ ಹಾಗೂ ಕಾರುಣ್ಯ ರಾಮ್ ಕೂಡ ನೃತ್ಯ (ಸೋಲೋ) ಪ್ರದರ್ಶನ ನೀಡಲಿದ್ದಾರೆ. ಅಲೋಕ್ ಬಾಬು ಸಂಗೀತ ಸಂಜೆ ಪ್ರಸ್ತುತಪಡಿಸಲಿದ್ದಾರೆ. ಅನುಶ್ರೀ ನಿರೂಪಣೆ ಮಾಡಲಿದ್ದಾರೆ’ ಎಂದು ಹೇಳಿದರು.
‘ಇದಕ್ಕೂ ಮುನ್ನ 6ರಿಂದ ಸಂಗೀತ–ನೃತ್ಯ ಕಾರ್ಯಕ್ರಮ ಇರಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.