ADVERTISEMENT

ಸಂವಿಧಾನ ಉಳಿಸಿಕೊಳ್ಳುವ ಪ್ರಯತ್ನ ಬೇಕು

ಸಾಹಿತಿ ಮೊಗಳ್ಳಿ ಗಣೇಶ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 14:40 IST
Last Updated 26 ಅಕ್ಟೋಬರ್ 2018, 14:40 IST
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಹಮ್ಮಿಕೊಂಡಿದ್ದ ಜಾನಪದ ಮತ್ತು ಜಾಗತೀಕರಣ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ಮೊಗಳ್ಳಿ ಗಣೇಶ್‌, ಪ್ರೊ.ನೀಲಗಿರಿ ಎಂ.ತಳವಾರ್, ನಂಜಯ್ಯ ಹೊಂಗನೂರು ಭಾಗವಹಿಸಿದ್ದರು
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಹಮ್ಮಿಕೊಂಡಿದ್ದ ಜಾನಪದ ಮತ್ತು ಜಾಗತೀಕರಣ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ಮೊಗಳ್ಳಿ ಗಣೇಶ್‌, ಪ್ರೊ.ನೀಲಗಿರಿ ಎಂ.ತಳವಾರ್, ನಂಜಯ್ಯ ಹೊಂಗನೂರು ಭಾಗವಹಿಸಿದ್ದರು   

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದು ಸಾಹಿತಿ ಮೊಗಳ್ಳಿ ಗಣೇಶ್‌ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಜಾನಪದ ವಿಭಾಗ ಶುಕ್ರವಾರ ಹಮ್ಮಿಕೊಂಡಿದ್ದ ‘ಜಾನಪದ ಮತ್ತು ಜಾಗತೀಕರಣ– ಸಾಂಸ್ಕೃತಿಕ ಪಲ್ಲಟಗಳು’ ಕುರಿತು ಮಾತನಾಡಿದರು.

ದಲಿತ ಸಂಸ್ಕೃತಿ ಅಂಬೇಡ್ಕರ್‌ ಅವರಿಗೆ ಸಮಗ್ರವಾಗಿ ಪರಿಚಯವಿತ್ತು. ಅದನ್ನು ಕಾಪಾಡುವ ಮಹತ್‌ಕಾರ್ಯವನ್ನು ಅವರು ಮಾಡಿದ್ದರು. ಇದರ ಪ್ರತಿಫಲನವೇ ಭಾರತದ ಸಂವಿಧಾನ. ಈ ಸಂವಿಧಾನವು ಸಮಾನತೆಯನ್ನು ಪ್ರತಿಷ್ಠಾಪಿಸುವ ಸಂಕಲ್ಪ ಹೊಂದಿದೆ. ಈಚಿನ ದಿನಗಳಲ್ಲಿ ಸಂವಿಧಾನದ ಆಧಾರ ಸ್ತಂಭಗಳನ್ನು ಅಭದ್ರಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

ADVERTISEMENT

‘ಮೋದಿ, ಅಂಬಾನಿಗೆ ಭಾರತದ ಬಡವರ, ದಲಿತರ ಸಮಸ್ಯೆಗಳು ತಿಳಿದಿಲ್ಲ. ಅವರ ವೈಭವ ಈ ದೇಶದ ಬದುಕಲ್ಲ. ಈ ದೇಶದ ಶೋಷಿತರ ಬದುಕನ್ನು ಅರ್ಥಮಾಡಿಕೊಂಡಿದ್ದ ಅಂಬೇಡ್ಕರ್ ಬದುಕಿನ ಆಶಾಕಿರಣವನ್ನು ಮೂಡಿಸಿದ್ದರು. ಅದನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದು ಅವರು ಕಿವಿಮಾತು ಹೇಳಿದರು.

ಹಳೆಯ ಜಾನಪದವನ್ನೇ ಮುಂದುವರೆಸುವ ಅಗತ್ಯವಿಲ್ಲ. ಆಫ್ರಿಕಾ ಮೂಲದ ಮೈಕಲ್‌ ಜಾಕ್ಸನ್‌ ತನ್ನ ವಿಶೇಷ ನೃತ್ಯ, ಹಾಡಿನ ಮೂಲಕ ಹೊಸ ಸಂಸ್ಕೃತಿಯನ್ನೇ ಹುಟ್ಟುಹಾಕಿದನು. ಅದೀಗ ಪರಂಪರೆಯ ಭಾಗವಾಗಿದೆ. ನಾವು ಅಂತೆಯೇ, ಹೊಸ ಪರಂಪರೆಯನ್ನು ಹುಟ್ಟುಹಾಕಿದರೆ ಭವಿಷ್ಯದಲ್ಲಿ ಅದು ಜಾನಪದವಾಗುತ್ತದೆ. ಈ ಜವಾಬ್ದಾರಿ ಎಲ್ಲ ನವ ತರುಣರ ಮೇಲಿದೆ ಎಂದರು.

ಕುವೆಂಪು ಕನ್ನಡಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ್ ಅಧ್ಯಕ್ಷತೆವಹಿಸಿದ್ದರು. ಜಾನಪದ ಅಧ್ಯಯನ ಮಂಡಳಿ ಅಧ್ಯಕ್ಷ ನಂಜಯ್ಯ ಹೊಂಗನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.