ಪಿರಿಯಾಪಟ್ಟಣ: ‘ವಿದ್ಯಾರ್ಥಿಗಳು ಸರ್ಕಾರಿ ಸವಲತ್ತು ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು’ ಎಂದು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪೇಟೆ ಶಾಲೆಯಲ್ಲಿ ಶುಕ್ರವಾರ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ನೋಟ್ ಬುಕ್ ವಿತರಿಸಿ ಸ್ವಾಗತ ಕೋರಿ ಅವರು ಮಾತನಾಡಿದರು.
ಸರ್ವರಿಗೂ ಶಿಕ್ಷಣ ದೊರೆಯುವಂತೆ ಮಾಡುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಈ ಕಾರಣಕ್ಕಾಗಿ ಸರ್ಕಾರವು ಶಿಕ್ಷಣಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಶಾಲೆಗಳ ನಿರ್ಮಾಣ ಹಾಗೂ ಶಾಲೆಗಳಿಗೆ ಮೂಲ ಸೌಲಭ್ಯಗಳ ಪೂರೈಕೆಗೆ ಅನುದಾನ ಮೀಸಲಿಟ್ಟಿದೆ ಎಂದರು.
ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳಿಗೂ ಮಿಗಿಲಾಗಿ ಸಾಧನೆ ಮಾಡುತ್ತಿದೆ. ಆದ್ದರಿಂದ ಇಂದಿನ ಶೈಕ್ಷಣಿಕ ವರ್ಷವು ವಿದ್ಯಾರ್ಥಿಗಳಿಗೆ ಉತ್ತಮವಾಗಿರಲಿ ಎಂದು ಆಶಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಮಾತನಾಡಿ, ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸಿಹಿ ಬಾದಾಮಿ ಹಾಲನ್ನು ನೀಡಿ ಸ್ವಾಗತ ಕೋರಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಈಚೂರು ಲೋಕೇಶ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವರಾಜ್, ಅಕ್ಷರ ದಾಸೋಹ ಅಧಿಕಾರಿ ಪ್ರಶಾಂತ್, ಬಿಆರ್ಸಿ ನಟರಾಜ್, ಐಸಿಒ ಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಮುಖ್ಯ ಶಿಕ್ಷಕರಾದ ನಿರ್ಮಲ, ನಟರಾಜ್, ಶಿಕ್ಷಕರಾದ ರವಿ, ಅನಿತಾ, ನೇತ್ರಾವತಿ, ಚಂದ್ರು, ವೀಣಾ ಹಾಜರಿದ್ದರು.
ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸ್ವಾಗತ: ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ತಹಶೀಲ್ದಾರ್ ನಿಸರ್ಗ ಪ್ರಿಯ ಮಕ್ಕಳಿಗೆ ಗುಲಾಬಿ ಹೂವು ಮತ್ತು ಸಿಹಿ ನೀಡುವ ಮೂಲಕ ಶಾಲೆಗೆ ಸ್ವಾಗತ ಕೋರಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್ ಮಕ್ಕಳ ಬಿಸಿ ಊಟ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಮಕ್ಕಳಿಗೆ ಊಟ ಬಡಿಸಿ ಸಿಹಿ ಹಂಚಿದರು.
ಈ ದಿನದ ವಿಶೇಷವಾಗಿ ಶಾಲೆಯ ಶಿಕ್ಷಕರ ವೃಂದವು ಶಾಲೆಯ ಮುಂಭಾಗ ತಳಿರು ತೋರಣಗಳು ಬಲೂನ್ ಹಾಗೂ ವಿವಿಧ ರೀತಿಯ ರಂಗೋಲಿಗಳನ್ನು ಬಿಡಿಸುವ ಮೂಲಕ ಶಾಲೆ ಸಿಂಗರಿಸಲಾಗಿತ್ತು.
ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಆರ್.ವಿ.ವಿಶ್ವನಾಥ್, ಬಿಆರ್ಸಿ ಶಿವರಾಜು, ಪ್ರಾಂಶುಪಾಲ ವೆಂಕಟೇಶ್, ಉಪನ್ಯಾಸಕರಾದ ಲಕ್ಷ್ಮಿಕಾಂತ್, ರಮೇಶ್ ಚಂದ್ರ, ಮುಖ್ಯ ಶಿಕ್ಷಕಿ ಲಿಲ್ಲಿ ಮೇರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.