ತಿ.ನರಸೀಪುರ: ತಾಲ್ಲೂಕಿನ ತುಂಬಲದ ಪಿಎಂಶ್ರೀ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಗುರುಕುಲದ ಮಾದರಿಯಲ್ಲಿ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಶುಕ್ರವಾರ ವಿಭಿನ್ನವಾಗಿ ಶಾಲೆಗೆ ಸ್ವಾಗತಿಸಲಾಯಿತು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಮಕ್ಕಳನ್ನ ಆಟೊದಲ್ಲಿ ಶಾಲೆಗೆ ಬರಮಾಡಿಕೊಂಡು ಸ್ವಾಗತಿಸಲಾಯಿತು.
ಶಾಲೆಗೆ ಆಗಮಿಸಿದ ಮಕ್ಕಳಿಗೆ ಗುಲಾಬಿ ಹೂ ಕೊಟ್ಟು ‘ಸ್ವಾಗತ ಮಕ್ಕಳೇ’ ಎಂದು ಹರ್ಷೋದ್ಗಾರ ತೆಗೆದಾಗ ಚಿಣ್ಣರಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ. ಚಾಕೊಲೇಟ್ ಕೊಟ್ಟಾಗ ಸಂಭ್ರಮ ಇಮ್ಮಡಿಸಿತ್ತು. ಕಳೆದೆರಡು ತಿಂಗಳ ನಂತರ ಸಹಪಾಠಿಗಳನ್ನು ಮೊದಲ ಬಾರಿ ಭೇಟಿ ಮಾಡಿದ ಪುಳಕ ಉಂಟಾಗಿತ್ತು.
ಶಾಲೆಯಲ್ಲಿ ವಿದ್ಯಾರ್ಥಿಗಳು ಸರಸ್ವತಿ ಪೂಜೆ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಪಿಒ ಪ್ರಭುಸ್ವಾಮಿ ಹಾಗೂ ಶಿಕ್ಷಣ ತಜ್ಞ ಅಚ್ಯುತ್ ರಾವ್ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಕಲಿಕಾ ಸಾಮಗ್ರಿ ವಿತರಿಸಿದರು.
ಭೂ ನ್ಯಾಯ ಮಂಡಳಿ ಸದಸ್ಯರಾದ ತುಂಬಲ ಅಂದಾನಿ ಮಾತನಾಡಿ, ‘ಸರ್ಕಾರವು ಮಕ್ಕಳನ್ನ ಶಾಲೆಗೆ ದಾಖಲಿಸಿಕೊಳ್ಳಲು ವಯಸ್ಸಿನ ಮಿತಿ ನಿಗದಿಪಡಿಸಿರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದರು. ಮಕ್ಕಳನ್ನು 1ನೇ ತರಗತಿಗೆ ದಾಖಲಿಸಿಕೊಳ್ಳಲು 5 ವರ್ಷ 6ತಿಂಗಳ ನಿಯಮವು ಸರಿಯಾದ ಕ್ರಮವಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು
ಎಸ್ಡಿಎಂಸಿ ಅಧ್ಯಕ್ಷ ನಂದೀಶ್, ಸದಸ್ಯರಾದ ಗೋಪಾಲ್, ರಮೇಶ್, ಇಂದ್ರಮ್ಮ, ರಾಜೇಶ್ವರಿ, ಮಧುಕುಮಾರ್, ಸೌಮ್ಯ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿದ್ದರಾಜು, ತುಂಬಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಧನಂಜಯ್, ಸಿಆರ್ಪಿ ಶ್ರೀಧರ್, ತುಂಬಲ ಶಾಲೆಯ ಮುಖ್ಯ ಉಪಾಧ್ಯಾಯ ರಾಯಪ್ಪ ಗೌಂಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.