ಮೈಸೂರು: ಅಸಹಜ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಒಪ್ಪದ ಮುಸ್ತಾಫ ಎಂಬ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳು ಸೇರಿದಂತೆ ನಾಲ್ವರು ತೃತೀಯಲಿಂಗಿಗಳನ್ನು ಲಷ್ಕರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ಮುಸ್ತಾಫ ತನಗೆ ಅಪರಿಚಿತರು ಶನಿವಾರ ಮಿಲಾದ್ ಉದ್ಯಾನದ ಬಳಿ ಹೋಗುತ್ತಿದ್ದಾಗ 6 ಮಂದಿ ಹೊಡೆದು ಗಾಯಗೊಳಿಸಿದ್ದಾಗಿ ದೂರು ನೀಡಿದ್ದರು. ಆದರೆ, ಅನುಮಾನಗೊಂಡ ಪೊಲೀಸರು ಮುಸ್ತಾಫ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ತನ್ನ ತೃತೀಯಲಿಂಗಿ ಸ್ನೇಹಿತರಾದ ನಗೀನಾ ಮತ್ತು ಅವರ ಸಹಚರರು ಹಲ್ಲೆ ನಡೆಸಿದ್ದಾಗಿ ಹೇಳಿಕೆ ನೀಡಿದರು.
ಆದರೆ, ಪೊಲೀಸರಿಗೆ ನಗೀನಾ ಅವರ ಮೊಬೈಲ್ ಸಂಖ್ಯೆಯಾಗಲಿ, ವಿಳಾಸವಾಗಲಿ ದೊರಕಿರಲಿಲ್ಲ. ಬಹಳ ಕ್ಲಿಷ್ಟಕರವಾಗಿದ್ದ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೌಸೀಫ್, ರವೀಂದ್ರಕುಮಾರ್, ತೃತೀಯ ಲಿಂಗಿಗಳಾದ ವಸೀಂ, ಅಮೃತಾ, ಅರುಣಾ, ಶ್ರಾವಣಿ ಬಂಧಿತರು. ಇವರು ಅಸಹಜ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಒಪ್ಪದೇ ಇದ್ದುದ್ದರಿಂದ ಮುಸ್ತಾಫ ಅವರ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಲಷ್ಕರ್ ಠಾಣೆಯಲ್ಲಿ ದಾಖಲಾಗಿದೆ.
ಇನ್ಸ್ಪೆಕ್ಟರ್ ಮುನಿಯಪ್ಪ, ಸಬ್ಇನ್ಸ್ಪೆಕ್ಟರ್ ಪೂಜಾ, ಸಹಾಯಕ ಸಬ್ಇನ್ಸ್ಪೆಕ್ಟರ್ ವೆಂಕಟಾಚಲನಾಯಕ, ಸಿಬ್ಬಂದಿಯಾದ ಪರಶಿವಮೂರ್ತಿ, ಮಂಜುಳಾ, ಚಿನ್ನಪ್ಪ ಕಾರ್ಯಾಚರಣೆ ತಂಡದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.