ಮೈಸೂರು: ಮೈಸೂರು ಶರಣ ಮಂಡಲಿ ವತಿಯಿಂದ ಡಾ.ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿಯನ್ನು ನಾಲ್ವರು ಗಣ್ಯರಿಗೆ ಪ್ರದಾನ ಮಾಡಲಾಯಿತು.
ಇಲ್ಲಿನ ಪತ್ರಕರ್ತರ ಸಂಘದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗ ಕರ್ತೃ ಸಿದ್ಧಾಂತಿ ಡಾ.ಕೆ.ಜಿ.ಪುಟ್ಟಹೊನ್ನಯ್ಯ, ಡಿವೈಎಸ್ಪಿ ಅರುಣ್ ನಾಗೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅವರು ಪ್ರಶಸ್ತಿ ಸ್ವೀಕರಿಸಿದರು.
ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್, ‘ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರಜಾತಂತ್ರವಾದಿಗಳಾಗಿದ್ದರು’ ಎಂದು ಶ್ಲಾಘಿಸಿದರು.
ಅವರು ಅಂದೇ ತಮ್ಮ ಕಾಲೇಜಿನಲ್ಲಿ ಕನ್ನಡ ಸಂಸ್ಕೃತಿ ವಿಭಾಗ ಆರಂಭಿಸಿ, ಚುನಾವಣೆ ನಡೆಸಿದ್ದರು. ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಅವರು ಅದಮ್ಯವಾದ ಒಲವನ್ನು ತೋರಿಸುತ್ತಿದ್ದರು ಎಂದರು.
‘ಒಮ್ಮೆ ಚುನಾವಣೆಗೆ ಸ್ಪರ್ಧಿಸಿದಾಗ ಸ್ವಾಮೀಜಿ ಅವರ ಜತೆಯಲ್ಲೇ ನನ್ನ ಪ್ರತಿಸ್ಪರ್ಧಿ ಇದ್ದರು. ಈ ವೇಳೆ ನಾನು ಹೋಗಿ ಕೈ ಮುಗಿದಾಗ, ನೀನು ನಮ್ಮ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿ. ಎಲ್ಲರಿಗಿಂತ ಅಧಿಕ ಮತಗಳು ನಿನಗೆ ಲಭಿಸಲಿ ಎಂದು ಎದುರಾಳಿ ಅಭ್ಯರ್ಥಿ ಎದುರೇ ಆಶೀರ್ವದಿಸಿದ್ದರು. ಇದು ಅವರ ನಿಷ್ಠುರವಾದಕ್ಕೆ ಕೈಗನ್ನಡಿ’ ಎಂದು ತಿಳಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಡಿ.ಎಸ್.ಸದಾಶಿವಮೂರ್ತಿ ಮಾತನಾಡಿ, ‘ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ನಾಡಿನ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ’ ಎಂದು ಹೇಳಿದರು.
ಜೆಎಸ್ಎಸ್ ಸಂಗೀತ ಸಭಾ, ಜೆಎಸ್ಎಸ್ ಪ್ರಕಟಣಾ ವಿಭಾಗವನ್ನು ತೆರೆಯುವ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅನರ್ಘ್ಯ ಕೊಡುಗೆಗಳನ್ನು ಅವರು ನೀಡಿದ್ದಾರೆ ಎಂದರು.
ಮಂಡಲಿಯ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.