ಮೈಸೂರು: ‘ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸಲು ಹೊರಟಿದ್ದಾರೆ. ಏಕೆಂದರೆ ಅವರು ಆರ್ಎಸ್ಎಸ್ನವರು ಅಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಇಲ್ಲಿ ಹೇಳಿದರು.
ಹೊಸ ನಾಯಕತ್ವ ಹಾಗೂ ಹೊಸಮುಖಗಳಿಗೆ ಬಿಜೆಪಿಯಲ್ಲಿ ಆದ್ಯತೆ ಸಿಗಲಿದೆ ಎಂಬ ಬಿ.ಎಲ್.ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯಲ್ಲಿ ಸಂತೋಷ್ ಮಾತು ನಡೆಯುತ್ತದೆ. ಬಸವರಾಜ ಬೊಮ್ಮಾಯಿ ಈ ಮೊದಲು ನಮ್ಮೊಂದಿಗೆ ಜನತಾ ಪರಿವಾರದಲ್ಲಿ ಇದ್ದರೂ ನಮ್ಮ ರಾಜಕೀಯ ಪಟ್ಟುಗಳನ್ನು ಕಲಿಯಲಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.
‘ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಬಂದು ಬಹಳ ದಿನವಾಗಿದೆ. ಬಿಜೆಪಿ ಕಿತ್ತೊಗೆಯಲು ವಿಧಾನಸಭಾ ಚುನಾವಣೆಗಾಗಿ ಜನ ಕಾಯುತ್ತಿದ್ದಾರೆ’ ಎಂದರು.
‘ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಿಂದ ಹಿಡಿದು ಎಲ್ಲಾ ಪ್ರಕರಣಗಳ ನಿರ್ವಹಣೆಯಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಈಗ ದುರ್ಬಲ ಗೃಹ ಸಚಿವ ಹಾಗೂ ಮುಖ್ಯಮಂತ್ರಿ ಇದ್ದಾರೆ. ಕಾನೂನು ಸುವ್ಯವಸ್ಥೆಯೇ ಇಲ್ಲದಂತಾಗಿದೆ’ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನದ್ದು ವಂಶಪಾರಂಪರ್ಯ ರಾಜಕಾರಣ ಎಂಬ ಸಂತೋಷ್ ಹೇಳಿಕೆಗೆ, ‘ಹಾಗಿದ್ದರೆ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಕ್ಕಳು ಯಾರು? ನಮ್ಮನ್ನು ಟೀಕಿಸಲು ಅವರಿಗೆ ನೈತಿಕತೆ ಇದೆಯೇ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.