ನಂಜನಗೂಡು: ತಾಲ್ಲೂಕಿನ ಚಿಕ್ಕಯ್ಯನ ಛತ್ರ ಗ್ರಾಮದ ಪ್ರಸನ್ನ ನಂಜುಡೇಶ್ವರ ಸ್ವಾಮಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಿದ ತಗಡೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಪರ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದನ್ನು ಸ್ವಾಗತಿಸಿ, ಹರಕೆ ಸಲ್ಲಿಸಿ ಸಿಹಿ ಹಂಚಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಯಾರಿಗೂ ಅನ್ಯಾಯ ಮಾಡಿಲ್ಲ, ಸರ್ಕಾರಿ ಭೂಮಿ ಕಬಳಿಸಿಕೊಂಡಿಲ್ಲ, ಅವರ ಪತ್ನಿ ಪಾರ್ವತಿ ಅವರಿಗೆ ತವರು ಮನೆಯವರು ನೀಡಿರುವ ಜಮೀನನ್ನು ಮುಡಾ ವಶಪಡಿಸಿಕೊಂಡಿತ್ತು, ನಿಯಮಾನುಸಾರ ಅವರಿಗೆ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು’ ಎಂದರು.
‘ಅವರ ಕುಟುಂಬದ ಮೇಲೆ ಕಪ್ಪು ಮಸಿ ಬಳಿಯುವ ಉದ್ದೇಶದಿಂದ ಬಿಜೆಪಿ ಹಾಗೂ ಜೆಡಿಎಸ್ನವರು ಕೇಂದ್ರ ಸರ್ಕಾರದ ಮೂಲಕ ಇಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡರು. ಇದಕ್ಕೆ ನ್ಯಾಯಾಲಯವು ಛೀಮಾರಿ ಹಾಕಿರುವುದು ಸತ್ಯಕ್ಕೆ ಸಂದ ಜಯವಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೊಕ್ಕಹಳ್ಳಿ ಸೋಮಸುಂದರ್, ಎಂ.ದಕ್ಷಿಣ ಮೂರ್ತಿ, ರೇವಮ್ಮ , ಬಿ.ಎಂ.ನಾಗರಾಜು, ಬೊಕ್ಕಹಳ್ಳಿ ಸೋಮಸುಂದರ್, ಯಬ್ಯಾ ರಾಜಣ್ಣ , ಬಿ.ಆರ್.ರಾಕೇಶ್, ಅರ್ಕೇಶ್, ಹುಳಿಮಾವು ನಟರಾಜು, ಗ್ರಾ.ಪಂ.ಸದಸ್ಯರಾದ ಪ್ರಭುಸ್ವಾಮಿ, ತೊರೆಮಾವು ಗಿರೀಶ್, ಟಿ.ಕೆ.ನಾಗೇಶ, ಟಿ.ಜೆ.ಮಹದೇವು, ಗೋವಿಂದ ಶೆಟ್ಟಿ, ಮಹದೇವಸ್ವಾಮಿ, ನಂಜುಂಡಸ್ವಾಮಿ, ಸಿದ್ದಪ್ಪ, ಮಹೇಶ, ಮಹದೇವು, ಪುನೀತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.