ಮೈಸೂರು: ‘ಸುಸ್ಥಿರ ಅಭಿವೃದ್ಧಿಯ ಮೂಲಕ ಜಗತ್ತು ಬದಲಾಯಿಸುವ ಶಕ್ತಿಯಿದ್ದು, ಆ ನಿಟ್ಟಿನಲ್ಲಿ ಯುವ ಸಮುದಾಯವು ಮುಂದಾಗಬೇಕು’ ಎಂದು ಕನಾಸ್ ಸ್ಟೇಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜು ದಂಡು ತಿಳಿಸಿದರು.
ಇಲ್ಲಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ವೇದಿಕೆ ಹಾಗೂ ಇಂಡೊ ಯುನಿವರ್ಸಲ್ ಎಂಜಿನಿಯರಿಂಗ್ ಶಿಕ್ಷಣ (ಐಯುಸಿಇಇ) ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ವೇದಿಕೆಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಸುಸ್ಥಿರ ಅಭಿವೃದ್ಧಿ– ಜಗತ್ತಿನ ಬದಲಾವಣೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಜಾಗತಿಕ ತಾಪಮಾನದ ನಿಯಂತ್ರಣದ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿ ಹಿಂದೆಂದಿಗಿಂತಲೂ ಹೆಚ್ಚಿನ ಅಗತ್ಯವಿದ್ದು, ಗುರಿ ಸಾಧಿಸುವ ನಿಟ್ಟಿನಲ್ಲಿ ವಿಶ್ವಾಸ ಮೂಡಿಸಲು ಪ್ರಾಮಾಣಿಕ, ದಯೆ, ಗೌರವದ ಕಡೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.
ಒಕ್ಲೊಹಾಮಾ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಡಾ.ರಂಜಿ ವೈದ್ಯನಾಥನ್ ಮಾತನಾಡಿ, ‘ವಿದ್ಯಾರ್ಥಿಗಳು ಜಾಗತಿಕ ಬದಲಾವಣೆಗಳನ್ನು ಗುರುತಿಸಿ, ಸ್ಥಳೀಯವಾಗಿ ಮನೆ, ಕಾಲೇಜು, ನಗರ ಹಾಗೂ ತಮ್ಮ ರಾಜ್ಯದಲ್ಲಿ ಸುಸ್ಥಿರ ಯೋಜನೆಗಳನ್ನು ಜಾರಿಗೊಳಿಸಬೇಕು’ ಎಂದರು.
ವಿವಿಸಿಇ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ, ವಿ.ವಿ. ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಗೌರವ ಉಪಾಧ್ಯಕ್ಷ ಬಿ.ಶಿವಲಿಂಗಪ್ಪ, ಐಯುಸಿಸಿಐನ ನಿರ್ದೇಶಕಿ ಸಂಪದ ಪಚೌರಿ ಇದ್ದರು.
ಸ್ಮಾರ್ಟರ್ ಧರ್ಮದ ಸಹಸಂಸ್ಥಾಪಕ ಕಾರ್ತಿಕ್ ಪೊನ್ನಪ್ಪ, ಯುಎನ್ಇಪಿ ರಾಯಭಾರಿ ಸ್ನೇಹ ಸಾಹಿ, ಎಸ್ಡಿಜಿ–13 ಪ್ರಾಜೆಕ್ಟ್ ರೀಸರ್ಜ್ ಅಸೋಸಿಯೇಟ್ ಬೆರ್ಜಿಸ್, ಕ್ಲೈಮೆಟ್ ಆ್ಯಕ್ಟ್ ಫೌಂಡೇಶನ್ನನ ಹೀತಾ ಲಖಾನಿ, ಬ್ರಿಂಗ್ ಬ್ಯಾಕ್ ಗ್ರೀನ್ ಫೌಂಡೇಶನ್ನ ಅಖಿಲೇಶ್ ಅನಿಲ್ ಕುಮಾರ್ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.