ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಏತ ನೀರಾವರಿ ಯೋಜನೆಯನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಶುಕ್ರವಾರ ಪರಿಶೀಲನೆ ನಡೆಸಿದರು. ಆಗಸ್ಟ್ ವೇಳೆಗೆ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದರು.
ವಿವಿಧ ಕಾರಣಗಳಿಗಾಗಿ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗಿದೆ ಎಂದ ಅವರು, ಆಗಸ್ಟ್ ವೇಳೆಗೆ ನಂಜನಗೂಡು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯಲಿದೆ ಎಂದು ಹೇಳಿದರು.
ನಂಜನಗೂಡು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಬಹು ನಿರೀಕ್ಷಿತ ಸುತ್ತೂರು ಏತ ನೀರಾವರಿ ಯೋಜನೆಯು ₹ 233 ಕೋಟಿ ಮೊತ್ತದ್ದು. ಇದರಿಂದ ನಂಜನಗೂಡಿನ 2, ಚಾಮರಾಜನಗರದ 21 ಹಾಗೂ ಯಳಂದೂರಿನ 1 ಕೆರೆಗೆ ನೀರು ತುಂಬಿಸುವ ಗುರಿ ಹಾಕಿಕೊಳ್ಳಲಾಗಿದೆ.
ಮೊದಲ ಹಂತದಲ್ಲಿ 11, ಇನ್ನುಳಿದ ಕೆರೆಗಳಿಗೆ 2ನೇ ಹಂತದಲ್ಲಿ ನೀರು ತುಂಬಿಸಲಾಗುತ್ತದೆ. ಇದರಿಂದ ಅಂತರ್ಜಲ ಅಭಿವೃದ್ಧಿಯಾಗಿ ಆ ಭಾಗದ ಕೊಳವೆಬಾವಿಗಳಲ್ಲಿ ನೀರು ಹೆಚ್ಚುತ್ತದೆ. ಇದರಿಂದ 57 ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ.
ಕೆರೆಗಳು ಯಾವುವು?
ನಂಜನಗೂಡಿನ ಕುಂಕೆರೆ, ಚಿಕ್ಕಹೊಮ್ಮಕೆರೆ, ಚಾಮರಾಜನಗರದ ಜನ್ನೂರು ಕೆರೆ, ಬಾಗಲಿ, ಉಮ್ಮತ್ತೂರು, ಯಡಿಯೂರು ಅಡ್ಡಹಳ್ಳ, ದೊಡ್ಡರಾಯಪೇಟೆ, ಹೊಮ್ಮ, ಕಣ್ಣೇಗಾಲ, ಕೋಡಿಮೊಳೆ, ಅಂಬ್ಲೆ, ದೊಡ್ಡಕೆರೆ, ಚಿಕ್ಕಕೆರೆ, ಸಿಂಡಿಗೆರೆ, ಮರಗದಕೆರೆ, ಬಂಡಿಗೆರೆ, ನಗರದ ಕೆರೆ, ಸರಗೂರು ಮೋಳೆ, ಹೆಬ್ಬಳ್ಳ, ಮಲ್ಲದೇವನಹಳ್ಳಿ, ಪುಟ್ಟನಪುರ, ಹೊಂಡರಬಾಳು, ನಾಗವಳ್ಳಿ, ಕಾಗಲವಾಡಿ ಕೆರೆಗಳು ಈ ಯೋಜನೆ ವ್ಯಾಪ್ತಿಯಲ್ಲಿವೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.