ಎಚ್.ಡಿ.ಕೋಟೆ: ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಸಮೀಪದ ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆ ತಹಶೀಲ್ದಾರ್ ಆರ್.ಮಂಜುನಾಥ್ ಶನಿವಾರ ಭೇಟಿ ನೀಡಿ ಆದಿವಾಸಿಗಳ ಸಮಸ್ಯೆ ಆಲಿಸಿದರು.
‘ಕಳೆದ ಎರಡು ದಿನಗಳ ಹಿಂದೆ ವಾಸವಿದ್ದ 3 ಮನೆಗಳಲ್ಲೇ ಒಂದೆರಡು ದಿನಗಳ ಮಟ್ಟಿಗೆ ಇರಿ. ಆದರೆ, ಇದು ತಾತ್ಕಾಲಿಕ ಮಾತ್ರ. ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿದ ನಂತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಹುಲಿ ಯೋಜನೆ ನಿರ್ದೇಶಕ ಮಹೇಶ್ಕುಮಾರ್, ‘ಇವರನ್ನು ಪುನರ್ವಸತಿ ಮಾಡಬೇಕಾದರೆ ಗ್ರಾಮಸಭೆಯ ಒಪ್ಪಿಗೆ ಬೇಕು. ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾಮಟ್ಟದ ಸಮಿತಿಯಲ್ಲಿ ತೀರ್ಮಾನವಾಗಬೇಕು. ಅಲ್ಲಿಯವರೆಗೂ ಇವರು ಕಳೆದ 8 ವರ್ಷಗಳಿಂದ ಎಲ್ಲಿ ವಾಸವಿದ್ದರೋ ಅಲ್ಲಿಯೇ ಇರಬೇಕು. ಅನಧಿಕೃತವಾಗಿ ಮನೆಗಳಲ್ಲಿ ಉಳಿದುಕೊಂಡರೆ ಅದು ಕಾನೂನಿನ ಉಲ್ಲಂಘನೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತದೆ’ ಎಂದರು.
‘3 ಮನೆಗಳಲ್ಲಿ 12 ಕುಟುಂಬಗಳು ಉಳಿದುಕೊಳ್ಳಲು ಸಾಧ್ಯವೇ? ತಹಶೀಲ್ದಾರ್ ಅವರು ಇದೆಂತಹ ನ್ಯಾಯ ಕೊಟ್ಟಿದ್ದಾರೆ?’ ಎಂದು ಗಿರಿಜನ ಮುಖಂಡ ಸಿದ್ದರಾಜು ಕಿಡಿಕಾರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.