ಮೈಸೂರು: ‘ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್’ ಎಂಬ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಹೇಳಿಕೆಗೆ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿರುಗೇಟು ನೀಡಿದ್ದಾರೆ.
ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ಸಚಿವರದು ಹಾಸ್ಯಾಸ್ಪದ ಹೇಳಿಕೆ. ಸಾಕ್ಷಿ ಎಲ್ಲಿಯೂ ಇಲ್ಲ. ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಯಾರೆಂದು ಎಲ್ಲರಿಗೂ ಗೊತ್ತಿದೆ. ಸಚಿವರು ಹೇಳಿದ ಕಥೆಯನ್ನು ನಾನು ಎಲ್ಲೂ ಕೇಳಿಲ್ಲ’ ಎಂದು ಹೇಳಿದರ
‘ಟಿಪ್ಪು ಕಾಲದಲ್ಲಿ ನಾಲ್ಕು ಯುದ್ಧ ನಡೆದಿದೆ. ಅವರು ದೇವಸ್ಥಾನ ಕೆಡವಿದ್ದಾರೆ. ಶ್ರೀರಂಗನಾಥ ದೇಗುಲ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಮಾತ್ರ ಪೂಜೆ ನಡೆಯುತ್ತಿತ್ತು. ಇದು ಇತಿಹಾಸ. ಮತದಾರರನ್ನು ಓಲೈಸಲು ಏನೇನೋ ಹೇಳಬಾರದು. ರೇಷ್ಮೆ ಕೃಷಿ ಪರಿಚಯ ಸೇರಿ ಕೆಲ ಉಪಯೋಗದ ಕೆಲಸ ಮಾಡಿರಬಹುದು. ಒಂದು ಒಳ್ಳೆಯ ಕೆಲಸದಿಂದ ನೂರು ತಪ್ಪುಗಳನ್ನು ಮುಚ್ಚಿ ಹಾಕಲಾಗದು’ ಎಂದರು.
‘ಸಾಕ್ಷಿ ತೋರಿಸಿ ಸರಿಯಾದ ಇತಿಹಾಸ ತಿಳಿಸುವ ಕೆಲಸ ಮಾಡಬೇಕು. ಕೆಲವರು ಇತಿಹಾಸದ ಬಗ್ಗೆ ಮಾತನಾಡಿ ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.