ADVERTISEMENT

ಮಧ್ಯ ಪ್ರವೇಶಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯ

ವಿ.ವಿ. ವ್ಯಾಪ್ತಿಗೆ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 20:53 IST
Last Updated 27 ಡಿಸೆಂಬರ್ 2020, 20:53 IST
ದುರ್ಗಾದಾಸ್‌
ದುರ್ಗಾದಾಸ್‌   

ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಸ್ವಾಯತ್ತತೆ ಪಡೆಯುವ ದಿಸೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂಬ ಭರವಸೆಯಲ್ಲಿರುವಾಗ, ಕೇಂದ್ರವನ್ನು ವಿಶ್ವವಿದ್ಯಾಲಯದ ಅಧೀನಕ್ಕೊಳಪಡಿಸುವ ಪ್ರಕ್ರಿಯೆ ನಡೆಯುತ್ತಿರುವುದು ದಿಗ್ಭ್ರಾಂತಿ ಮೂಡಿಸಿದೆ. ಈ ಪ್ರಕ್ರಿಯೆಯ ಭಾಗವಾಗಿ ಕೇಂದ್ರದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಇಡೀ ಶೈಕ್ಷಣಿಕ ಸಿಬ್ಬಂದಿಗೆ ಬಿಡುಗಡೆ ಪತ್ರ ನೀಡಿದ್ದು, ಅಧ್ಯಯನ ಕೇಂದ್ರವನ್ನು ಶಾಶ್ವತವಾಗಿ ಮುಚ್ಚುವ ಪ್ರಯತ್ನದ ಆರಂಭಿಕ ನಡೆಯಾಗಿದೆ’ ಎಂದು ಕೇಂದ್ರದ, ನಿವೃತ್ತ ಯೋಜನಾ ನಿರ್ದೇಶಕ ಡಾ.ಕೆ.ಆರ್.ದುರ್ಗಾದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತೀಯ ಭಾಷಾ ಸಂಸ್ಥಾನದಡಿಯಲ್ಲಿರುವ ಇತರೆ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 200ಕ್ಕೂ ಹೆಚ್ಚು ವಿವಿಧ ಭಾಷೆಗಳ ಸಿಬ್ಬಂದಿಯನ್ನು ಬಿಟ್ಟು, ಕೇವಲ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಶೋಧಕರನ್ನು ಕೆಲಸದಿಂದ ತೆಗೆಯುತ್ತಿರುವುದು ಅನುಮಾನಗಳನ್ನು ಮೂಡಿಸಿದೆ. ಇದು ಕೇಂದ್ರದ ಸಂಶೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಸ್ವಾಯತ್ತತೆಯನ್ನು
ತಡೆಯುವ ಪ್ರಯತ್ನವೇ ಆಗಿದೆ ಎಂದಿರುವ ಅವರು,ಈ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರ ಶಿಕ್ಷಣ ಸಚಿವಾಲಯದ ಮೂಲಕ ಭಾರತೀಯ ಭಾಷಾ ಸಂಸ್ಥಾನಕ್ಕೆ ಸೂಕ್ತ ಆದೇಶ ನೀಡಲು ಕ್ರಮ‌ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಾಲಿ ಶೈಕ್ಷಣಿಕ ಸಿಬ್ಬಂದಿಯನ್ನು ಬದಲಿಸುವ ಪ್ರಯತ್ನ ಕೇಂದ್ರದ ಬೆಳವಣಿಗೆಗೆ ಮಾರಕ ಪರಿಣಾಮ ಬೀರಲಿದೆ. ಈ ಶೈಕ್ಷಣಿಕ ಸಿಬ್ಬಂದಿಯನ್ನು ಕೈಬಿಟ್ಟರೆ ಕೇಂದ್ರವು ಶೂನ್ಯ ಸ್ಥಿತಿಯನ್ನು ತಲುಪಲಿದೆ. ಇದು ಸ್ವಾಯತ್ತತೆಯನ್ನು ಪಡೆಯುವ ಪ್ರಯತ್ನಕ್ಕೂ ಅಡ್ಡಿಯುಂಟುಮಾಡುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.