ADVERTISEMENT

ಮೈಷುಗರ್‌ ಕಾರ್ಖಾನೆ ಪುನರಾರಂಭಿಸಲು ಯದುವೀರ ಮನವಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 16:18 IST
Last Updated 16 ಜೂನ್ 2020, 16:18 IST
ಯದುವೀರ
ಯದುವೀರ   

ಮೈಸೂರು: ‘ಮಂಡ್ಯ ಜಿಲ್ಲೆಯ ರೈತರು ಬೆಳೆದಿರುವ ಕಬ್ಬನ್ನು ಮಾರಾಟ ಮಾಡಲು ಸಕ್ಕರೆ ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಯಡಿ (ಒ ಅಂಡ್‌ ಎಂ) ಆರಂಭಿಸಿ’ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದ್ದಾರೆ.

‘ಮೈಷುಗರ್ ಕಾರ್ಖಾನೆಯ ಪರಂಪರೆ ದೃಷ್ಟಿಯಿಂದ ಖಾಸಗೀಕರಣಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿರುವುದು ಅರ್ಥವಾಗುವಂಥದ್ದು’ ಎಂದು ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಕಾರ್ಖಾನೆ ನಡೆಸುವಲ್ಲಿ ಸರ್ಕಾರದ ವೈಫಲ್ಯ ಮತ್ತು ಸಂಪೂರ್ಣ ಖಾಸಗೀಕರಣದ ವಿರುದ್ಧ ಸಾರ್ವಜನಿಕರ ಭಾವನೆಗಳ ನಡುವೆ ಇರುವ ಒಂದು ಆಯ್ಕೆ ಎಂದರೆ, ಒ ಅಂಡ್‌ ಎಂ ವ್ಯವಸ್ಥೆಯಡಿ ನಡೆಸುವುದು. ಈ ವ್ಯವಸ್ಥೆಯು ಸಾರ್ವಜನಿಕರಿಗೆ ಸಮಾಧಾನ ಉಂಟು ಮಾಡುವುದರ ಜೊತೆಗೆ ಕಾರ್ಖಾನೆಯು ಮತ್ತೊಮ್ಮೆ ಸಮೃದ್ಧಿಯಾಗಿ ಕಾರ್ಯನಿರ್ವಹಣೆ ಮಾಡುವಂತೆ ನೋಡಿಕೊಳ್ಳಬಹುದು. ಕಬ್ಬು ಬೆಳೆಗಾರರಿಗೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ’ ಎಂದಿದ್ದಾರೆ.

ADVERTISEMENT

ಸ್ವಾಗತ: ಯದುವೀರ ನೀಡಿರುವ ಹೇಳಿಕೆಯನ್ನು ಬಿಜೆಪಿ ಶಾಸಕ, ನಿರಾಣಿ ಸಕ್ಕರೆ ಕಾರ್ಖಾನೆ ಸಮೂಹದ ಅಧ್ಯಕ್ಷ ಮುರುಗೇಶ್‌ ನಿರಾಣಿ ಸ್ವಾಗತಿಸಿದ್ದಾರೆ.

‘ರಾಜ್ಯ ಸರ್ಕಾರವೇ ಮೈಷುಗರ್‌ ಕಾರ್ಖಾನೆ ಆರಂಭಿಸಲಿ ಅಥವಾ ಖಾಸಗಿಯವರಿಗೆ ಕೊಡಲಿ; ಕಬ್ಬಿನ ಬೆಳೆ ಕಟಾವಿಗೆ ಬರುವುದಕ್ಕೆ ಮುಂಚೆ ನಿರ್ಧಾರ ಕೈಗೊಳ್ಳಬೇಕು’ ಎಂದು ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.