ADVERTISEMENT

ಅಡುಗೆ ಅನಿಲ ಬೆಲೆ ಏರಿಕೆ: ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:05 IST
Last Updated 9 ಜನವರಿ 2014, 6:05 IST

ರಾಯಚೂರು: ಅಡುಗೆ ಅನಿಲ ಹಾಗೂ ಆಟೊ ರಿಕ್ಷಾಗಳಿಗೆ ಬಳಕೆ ಮಾಡುವ ಸಿಲಿಂಡರ್‌ ಗ್ಯಾಸ್‌ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯ­ಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಟನೆ ನಡೆಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುವ ಅಡುಗೆ ಅನಿಲ್‌ ಹಾಗೂ ಆಟೊ ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರದ ನೀತಿ ಜನವಿರೋಧಿಯಾಗಿದೆ. ಈಗಾಗಲೇ ಅನೇಕ ಬಾರಿ ಅನಿಲ ಬೆಲೆ ಏರಿಕೆ ಮಾಡಿದೆ. ಪುನಃ ಬೆಲೆ ಏರಿಕೆ ಮಾಡಿ, ಬಡ ಮತ್ತು ಮಧ್ಯಮ ವರ್ಗವನ್ನು ಸಂಕ­ಷ್ಟಕ್ಕೀಡು ಮಾಡಿದೆ ಎಂದು ದೂರಿದರು.

ಈ ಹಿಂದೆ ರಿಯಾಯ್ತಿ ದರ ಸಿಲಿಂಡರ್‌ಗಳನ್ನು 9ಕ್ಕೆ ಸೀಮಿತ­ಗೊಳಿಸಿದ ಹಿನ್ನೆಲೆಯಲ್ಲಿ ಮಧ್ಯಮ ವರ್ಗದ ಕುಟುಂಬಗಳ ನಿರ್ವಹಣೆ ದುಸ್ತರವಾಗಿದೆ. ಸಿಲಿಂಡರ್ ಸಂಪರ್ಕ ಪಡೆಯುವುದು ಹಾಗೂ ಹೆಚ್ಚುವರಿ ಸಿಲಿಂಡರ್ ಪಡೆಯುವುದು ಸಮಸ್ಯೆ­ಯಾ­ಗಿದ್ದರೂ ಈ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸದೇ ಸಿಲಿಂಡರ್‌ಗಳ ಬೆಲೆ ಏರಿಕೆ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.

ಕೇಂದ್ರ ಸರ್ಕಾರ ಏರಿಕೆ ಮಾಡಿರುವ ಅಡುಗೆ ಅನಿಲ ಹಾಗೂ ಆಟೊ ರಿಕ್ಷಾಗಳಿಗೆ ಬಳಸುವ ಸಿಲಿಂಡರ್‌ಗಳ ಬೆಲೆ ಇಳಿಸಬೇಕು, ಈ ಬಗ್ಗೆ ರಾಷ್ಟ್ರ­ಪತಿಗಳು ಮಧ್ಯೆಪ್ರವೇಶಿಸಿ ಸಾಮಾನ್ಯ ಜನರ ಸಂಕಷ್ಟ ಪರಿಹರಿಸಲು ಕ್ರಮ ಕೈಗೊಳ್ಳಬೇಕು, ಕೇಂದ್ರ ಸರ್ಕಾರ ಅನಿಲ ಬೆಲೆ ಏರಿಕೆಯನ್ನು ವಾಪಸ್‌ ಪಡೆಯ­ಬೇಕು ಎಂದು ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶರಣಮ್ಮ ಕಾಮರೆಡ್ಡಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಘಟಕದ ಪದಾಧಿಕಾರಿಗ­ಳಾದ ನೇತ್ರಾವತಿ, ಶಾಂತಾ, ಸೀತಾ­ನಾಯಕ, ಶೀಲಾ ಜಹಾಗೀರದಾರ್, ಸುಲೋಚನಾ,ಸುಶೀಲಾಗಣೇಶ, ಗಿರಿಜಮ್ಮ, ಶರಣಮ್ಮ. ಜಿಲ್ಲಾಧ್ಯಕ್ಷ ಬಸವನಗೌಡ ಬಾಗವಾಟ್,ಅಶೋಕ ಗಸ್ತಿ, ಆರ್‌. ತಿಮ್ಮಯ್ಯ, ತ್ರಿವಿಕ್ರಮ ಜೋಶಿ, ಬಂಡೇಶ ವಲ್ಕಂದಿನ್ನಿ,ರಮೇಶ ಗುರುಮಿಟ್ಕಲ್‌, ಬಿ.ರಾಮಚಂದ್ರ ಕಡ­ಗೋಲ, ಅಶ್ವಥ ರಾಜಪುರೋಹಿತ, ಮುಕ್ತರ್‌,  ಆಂಜನೇಯ ಯಕ್ಲಾಸ­ಪುರ, ರಮಾನಂದ ಯಾದವ್, ಎ.ಚಂದ್ರಶೇಖರ, ನರಸಪ್ಪ, ವಿಷ್ಣ ಚೌದರಿ, ಆದರ್ಶ, ವಿಶ್ವನಾಥ ಯಾದವ್, ಸಂದೀಪ ಕುಮಾರ, ಎನ್‌. ಮುರಳಿಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.