ADVERTISEMENT

ಅವ್ಯವಹಾರ: ತನಿಖೆಗೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 7:09 IST
Last Updated 6 ಮಾರ್ಚ್ 2014, 7:09 IST

ಸಿಂಧನೂರು: ತಾಲ್ಲೂಕಿನ ನೂರಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ, ಅಂದಾಜು 60 ಕೋಟಿ ವೆಚ್ಚದ ರಾಜೀವ್‌ಗಾಂಧಿ ಸಬ್‌ಮಿಷನ್‌ ಯೋಜನೆಯಲ್ಲಿ ಅಪಾರ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪ್ರಜಾಜಾಗ್ರತಿ ಸಂಘಟನೆ ಮತ್ತು ದಲಿತ ವಿಮೋಚನಾ ಸೇನೆ ತಾಲ್ಲೂಕು ಘಟಕಗಳು ಬುಧ­ವಾರ ತಹಶೀಲ್ದಾರ್‌ ಕಾರ್ಯಾಲಯದ ಮುಂದೆ ಸಾಂಕೇತಿಕ ಧರಣಿ ನಡೆಸಿದವು.

ಬಹುಕೋಟಿ ಮೊತ್ತದ ಯೋಜ­ನೆಯ ಹಣವನ್ನು ದುರ್ಬಳಕೆ ಮಾಡಿ­ಕೊಂಡಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರನ್ನು ಶುದ್ಧ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿಸಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು. ಗೊರೇಬಾಳ ಮತ್ತು 13 ಹಳ್ಳಿಗಳು , ದಡೆಸ್ಗೂರು ಮತ್ತು 17 ಹಳ್ಳಿಗಳು, ಆರ್.ಹೆಚ್.ಕ್ಯಾಂಪ್ ಮತ್ತು 25 ಹಳ್ಳಿಗಳು, ಭೋಗಾಪುರ ಮತ್ತು 13 ಹಳ್ಳಿಗಳು ಹಂತ 1 ಹಾಗೂ ಭೋಗಾಪುರ ಮತ್ತು 13 ಹಳ್ಳಿಗಳು ಹಂತ 2 ರಲ್ಲಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಆದರೂ ಎಇಇ ಬಿ.ಆರ್.ಗೌಡೂರು ಹಾಗೂ ಇಲಾಖೆಯ ಕೆಲ ಸಿಬ್ಬಂದಿಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮಂಜೂ­ರಾದ ಹಣವನ್ನು ಲಪಟಾಯಿಸಿದ್ದಾರೆ ಎಂದು ದೂರಿದರು.

ಭ್ರಷ್ಟಾಚಾರ ನಡೆಸಿದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಪುನರ್ವಸತಿ ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ಹಾಗೂ 2012-–13ನೇ ಸಾಲಿನಲ್ಲಿ ಸ್ಕೇರ್‌ಸಿಟಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ಮೇಲಧಿಕಾರಿಗಳು ಶೀಘ್ರ ತನಿಖೆ ನಡೆಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ತಹಸೀಲ್ದಾರ್ ಅವರ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯ­ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಧರಣಿಯಲ್ಲಿ ಪ್ರಜಾಜಾಗ್ರತಿ ಸಂಘಟ­ನೆಯ ಅಧ್ಯಕ್ಷ ಎಚ್.ಜಗದೀಶ ವಕೀಲ, ದಲಿತ ವಿಮೋಚನಾ ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ವಿರುಪಣ್ಣ ನಂದವಾಡಗಿ, ಮುಖಂಡರಾದ ಅಮರೇಶ ಗಿರಿಜಾಲಿ, ಶ್ರೀನಿವಾಸ.ವೈ, ರಾಜೇಶಗೌಡ, ವೀರೇಶ ಗೋಮರ್ಸಿ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.