ರಾಯಚೂರು: ಕ್ರಿಯಾಯೋಜನೆ ರೂಪಿಸದೇ ಕಾಮಗಾರಿಗಳನ್ನು ಕೈಗೆತ್ತಿಕೊಂಡರೆ ಮತ್ತು ಅನುದಾನ ಬಳಕೆಯಾಗದೆ ಕಾಮಗಾರಿಗಳು ಅಪೂರ್ಣವಾದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಳನ್ನೆ ಹೊಣೆ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಂ.ಕೂರ್ಮಾರಾವ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಸಕ್ತ ಜಿಲ್ಲಾ ಪಂಚಾಯಿತಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸುವರ್ಣಗ್ರಾಮ ಯೋಜನೆಯ ಟೆಂಡರ್ ಷರತ್ತುಗಳನ್ನು ಬದಲಿಸಿ ಗುಣಮಟ್ಟ ಹಾಗೂ ಕಾಲಮಿತಿ ನಿಗದಿಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಇದಕ್ಕೂ ಮೊದಲು ಸುರ್ವಣಗ್ರಾಮ ಯೋಜನೆಯಡಿ ಕಾಮಗಾರಿಗಳು ಅಪೂರ್ಣಗೊಂಡಿರುವ ಬಗ್ಗೆ ಸದಸ್ಯ ವಿಶ್ವನಾಥ ಪಾಟೀಲ್ ತೋರಣದಿನ್ನಿ ಮಾತನಾಡಿ, ನಿರ್ಮಿತಿ ಕೇಂದ್ರಕ್ಕೆ 2009ರಲ್ಲಿ ವಹಿಸಲಾಗಿದ್ದ ನಾಲ್ಕು ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ. ಆಡಳಿತಾತ್ಮಕ ಅನುಮೋದನೆ ಪಡೆಯದೇ ಕೆಲಸ ಪ್ರಾರಂಭಿಸಿ ಅರ್ಧಕ್ಕೆ ಸಿಲ್ಲಿಸಿದ್ದಾರೆ ಎಂದು ದೂರಿದರು.
ಶರಣಪ್ಪ ಕಲ್ಮಲಾ ಮಾತನಾಡಿ, ಏಜೆನ್ಸಿಗಳ ಕಾರ್ಯನಿರ್ವಹಣೆ ಮೇಲೆ ಉಪ ಕಾರ್ಯದರ್ಶಿಗಳೇ ಮೇಲುಸ್ತುವಾರಿ ಮಾಡಬೇಕು. ಕಾಮಗಾರಿ ಪೂರ್ಣಗೊಳ್ಳದೇ ಅನುದಾನ ಪಾವತಿ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.
ದಾನಿಗಳ ಹೆಸರು– ನಿರ್ಣಯಕ್ಕೆ ಒತ್ತಾಯ: ಸದಸ್ಯ ಹನುಮೇಶ ಮದ್ಲಾಪುರ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಭೂಮಿ ದಾನ ನೀಡುವ ದಾನಿಗಳ ಹೆಸರಿಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಮೌಲ್ಯಯುತ ಭೂಮಿಯನ್ನು ನೀಡುವ ದಾನಿಗಳ ಹೆಸರಿನ್ನು ಶಾಲೆಗಳಿಗೆ ಇರಿಸಿದರೆ ಹೆಚ್ಚಿನ ದಾನಿಗಳು ಮುಂದೆ ಬರಲು ಸಾಧ್ಯ ಎಂದರು.
ಮಾನ್ವಿ ತಾಲ್ಲೂಕಿನ ನವಲಕಲ್ ಸರ್ಕಾರಿ ಶಾಲೆಗೆ ಚನ್ನಮೂರ್ತಿ ಸ್ವಾಮಿ ಅವರ ಹೆಸರಿಡುವಂತೆ ಅವರು ಒತ್ತಾಯಿಸಿದರು. ಮಾನ್ವಿ ತಾಲ್ಲೂಕಿನ ರಾಜಲಬಂಡಿ ಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ಬಿಡುಗಡೆಯಾದ ಅನುದಾವನ್ನು ಮುಖ್ಯಪಾಧ್ಯಾಪಕರೇ ₹ 7ಲಕ್ಷ ನೇರವಾಗಿ ಪಡೆಯುವ ಮೂಲಕ ಅವ್ಯವಹಾರವೆಸಗಿದ್ದಾರೆ. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಕೂರ್ಮಾರಾವ್, ಎಸ್ಡಿಎಂಸಿಗಳಿಂದ ಭೂ ದಾನಿಗಳ ಹೆಸರನ್ನು ಶಾಲೆಗೆ ಇರಿಸುವ ಪ್ರಸ್ತಾವನೆ ಬಂದರೆ ಮಾತ್ರ ಪರಿಶೀಲಿಸಿ ನಿರ್ಧರಿಸಬಹುದಾಗಿದೆ ಎಂದರು. ಅಲ್ಲದೇ, ಭೂ ದಾನಿಗಳನ್ನು ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಆಹ್ವಾನಿಸಿ ಸನ್ಮಾನಿಸುವಂತೆಯೂ ಸೂಚಿಸಿದರು.
ರಾಜಲಬಂಡಿ ಶಾಲೆಗೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯ, ಈಗಾಗಲೇ ಮುಖ್ಯೋಪಾಧ್ಯಾಪಕರ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಸಭೆಗೆ ವಿವರಿಸಿದರು.
ಅಸ್ಲಂಪಾಷಾ ಮಾತನಾಡಿ ಈಗಾಗಲೇ ಗುಂಡಾ ಶಾಲೆಗೆ ಷಡಕ್ಷರಿ, ಬೀಜನಗೇರಾ ಶಾಲೆಗೆ ವೆಂಕಟೇಶ ಮಲ್ಲನಗೌಡ ಪಾಟೀಲ್, ಜಾಗೀರ ವೆಂಕಟಾಪುರ ಶಾಲೆಗೆ ಬೂದೆಮ್ಮ ಅವರು ಹೆಸರಿಡಲು ಪ್ರಸ್ತಾವನೆ ಸಲ್ಲಿಕೆಯಾಗಿವೆ ಎಂದರು.
ಅಂಗನವಾಡಿಗಳಲ್ಲಿ ನಿವೇಶನದ ಕೊರತೆ: ಉಪಾಧ್ಯಕ್ಷ ಜಾಫರ ಅಲಿಪಟೇಲ್ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೂ ನಿವೇಶನದ ಕೊರತೆಯಿದೆ. ನಿವೇಶನ ನೀಡುವ ದಾನಿಗಳ ಹೆಸರಿನ್ನು ಅಂಗನವಾಡಿ ಕೇಂದ್ರಗಳಿಗೂ ಇರಿಸಬೇಕು ಎಂದರು.
ಹನುಮೇಶ ಮಾತನಾಡಿ ಗ್ರಾಮಪಂಚಾಯಿತಿ 2ರಿಂದ 4 ಗುಂಟೆ ಭೂಮಿಯನ್ನು ನೊಂದಾಯಿಸಿಕೊಳ್ಳುತ್ತಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಿರುವ ಭೂಮಿಯನ್ನು ಯಾರೇ ಹೆಸರಿನಲ್ಲಿ ನೊಂದಾಯಿಸಿಕೊಂಡರು ದಾನಿಗಳ ಹೆಸರ ನಮೂದಿಸಬೇಕೆಂದರು. ಸದಸ್ಯೆ ಶಾಂತಮ್ಮ ದಯಾನಂದರೆಡ್ಡಿ ಮಾತನಾಡಿ, ಕಳೆದ ಸಾಮಾನ್ಯ ಸಭೆಯಲ್ಲಿ ಬಳಗಾನೂರು ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕುರಿತು ಇಂದಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆಆರ್ಡಿಎಲ್ ಅಧಿಕಾರಿಗಳು ಒಂದು ವಾರದಲ್ಲಿ ನಿವೇಶನ ಅಂತಿಮಗೊಳಿಸಲಾಗುತ್ತದೆ ಎಂದರು. ಅಸ್ಲಂಪಾಷಾ ಮಾತನಾಡಿ, ನಿರ್ಮಿತಿ ಕೇಂದ್ರ ಪ್ರಕರಣ ಸಿಬಿಐಗೆ ಹೋದ ನಂತರ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಅಲ್ಲಿದ್ದ ಸಿಬ್ಬಂದಿಯನ್ನು ಸೇವೆಯಿಂದ ತೆಗೆದು ಹಾಕಲಾಗಿದೆ.
ಹೊಸ ಅಧಿಕಾರಿಗಳಿಗೆ ಅಪೂರ್ಣವಾಗಿ ನಿಂತಿರುವ ಕಾಮಗಾರಿಗಳ ಬಗೆಗೆ ಮಾಹಿತಿಯಿಲ್ಲ. ಬಾಕಿಯಿರುವ ಕಾಮಗಾರಿಗಳು ನಿಂತು ಹೋಗಿವೆ ಎಂದರು. ಸರ್ಕಾರದ ಅನುಮೋದನೆ ಇಲ್ಲದೇ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಲಿಂಗಸುಗೂರು ತಾಲ್ಲೂಕಿನ ಉಪ್ಪಾರ ನಂದಿಹಾಳ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಉದ್ಯೋಗ ಖಾತರಿಯಡಿ ಅವ್ಯವಹಾರ ನಡೆಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸದಸ್ಯ ಭೂಪನಗೌಡ ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸರೋಜಮ್ಮ ಬಸವರಾಜ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.
ದೇವದುರ್ಗದ ಸಮಸ್ಯೆಗಳ ಬಗ್ಗೆ ಚರ್ಚೆ ಇಲ್ಲ: ದೇವದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿರುವ ಕಾರಣ ಆ ವಿಧಾನಸಭಾಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವಿಷಯವನ್ನು ಹೊರತುಪಡಿಸಿ ಚರ್ಚೆನಡೆಸಲಾಯಿತು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ: 13ನೇ ಹಣಕಾಸು ಯೋಜನೆಯಡಿಯಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳು ಪೂರ್ಣಗೊಂಡಿವೆ. ಅನುದಾನ ಲಭ್ಯವಿದ್ದರೂ ಯಾವುದೇ ಹಣ ಪಾವತಿ ಏಕೆ ಮಾಡಲಿಲ್ಲ ಎಂದು ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.