ರಾಯಚೂರು: ಉತ್ತರಾಖಂಡ ಪ್ರವಾಹ ಸಂತ್ರಸ್ತರ ನೆರವಿಗಾಗಿ 6,11,111 ರೂಪಾಯಿ ಮೊತ್ತದ ಚೆಕ್ನ್ನು ಗಂಜ್ ವರ್ತಕರ ಸಂಘದ ಹಾಗೂ ಕೈಗಾರಿಕೆ ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಅವರಿಗೆ ನೀಡಿದರು.
ಉತ್ತರಾಖಂಡ ರಾಜ್ಯದ ಪಿಥೋರ್ ಗಡ್, ರುದ್ರ ಪ್ರಯಾಗ, ಉತ್ತರಕಾಶಿ, ಕೇದಾರನಾಥ, ಬದರಿನಾಥ, ಹಾಗೂ ಚಮೋಲಿ ಪ್ರದೇಶಗಳಲ್ಲಿ ಈಚೆಗೆ ಸುರಿದ ಬಾರಿ ಮಳೆಯಿಂದ ಸಂಭವಿಸಿದ ಪ್ರವಾಹ ಮತ್ತು ಭೂ ಕುಸಿತದಿಂದ ಅನೇಕ ಜೀವಹಾನಿ ಮತ್ತು ಕುಟುಂಬಗಳು ನಿರ್ಗತಿಕವಾಗಿವೆ.
ಈ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಗಂಜ್ ವರ್ತಕರು ಹಾಗೂ ಕೈಗಾರಿಕೆಗಳ ಮಾಲೀಕರ ಸಂಘದ ಸಹಾಯಧನವನ್ನು ಸಂಗ್ರಹಿಸಲಾಗಿದೆ. ಆದಾಯ ತೆರಿಗೆ ವಿನಾಯ್ತಿ ಪಡೆಯಲು ಚೆಕ್ನ ಸ್ವೀಕೃತ ರಸೀದಿ ನೀಡಬೇಕು ಎಂದು ಸಂಘದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಮನವಿ ಮಾಡಿದರು.
ಚೆಕ್ ನೀಡುವ ಸಂದರ್ಭದಲ್ಲಿ ಗಂಜ್ ವರ್ತಕರ ಸಂಘದ ಕೋಶಾಧ್ಯಕ್ಷ ರಮೇಶಲಾಲ್ ದೋಖಾ, ಜಂಟಿ ಕಾರ್ಯದರ್ಶಿ ಗಧಾರ ಬೆಟ್ಟಪ್ಪ, ಸದಸ್ಯರಾದ ಗಿರಿರಾಜ ಮೂಥಾ, ಜಯಂತಿಲಾಲ ಮಿಶ್ರಾ, ಎಂ.ನಾಗರೆಡ್ಡಿ, ಕೈಗಾರಿಕೆ ಮಾಲೀಕರ ಸಂಘದ ಅಧ್ಯಕ್ಷ ವಿ.ನಾಗರೆಡ್ಡಿ, ಕಾರ್ಯದರ್ಶಿ ಲಕ್ಷ್ಮೀರೆಡ್ಡಿ, ಸದಸ್ಯರಾದ ಶಾಂತಿಲಾಲ ಮೂಥಾ, ಆರ್.ಕುರ್ಮಾರೆಡ್ಡಿ ಹಾಗೂ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.