ಸೊಲ್ಲಾಪುರ: ಹಿರಿಯ ನಾಗರಿಕರನ್ನು ಕಾಡುವ ಸಂಧಿನೋವು, ಮೊಣಕಾಲು ಬೇನೆ ಇತ್ಯಾದಿ ಸಮಸ್ಯೆ ನಿವಾರಣೆಗೆ ಇಲ್ಲಿನ ಅಶ್ವಿನಿ ಸಹಕಾರಿ ಆಸ್ಪತ್ರೆಯಲ್ಲಿ ಕಂಪ್ಯೂಟರೀಕೃತ ಚಿಕಿತ್ಸಾ ವಿಧಾನ ಅಳವಡಿಸಲಾಗಿದೆ.
ಕಂಪ್ಯೂಟರ್ ನೆರವಿನೊಂದಿಗೆ ಮೊಣಕಾಲಿಗೆ ಕೃತಕ ಚಿಪ್ಪು ಅಳವಡಿಕೆ, ಕೃತಕ ಸಂಧಿ ಜೋಡಣೆ ಇತ್ಯಾದಿಗಳನ್ನು `ಕೃತಕ ಸಂಧಿ ಜೋಡಣೆ ಚಿಕಿತ್ಸೆ' (ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜರಿ) ಮೂಲಕ ಅತ್ಯಾಧುನಿಕ ತಂತ್ರಜ್ಞಾನ `ಕಂಪ್ಯೂಟರೈಸ್ಡ್ ನ್ಯಾವಿಗೇಶನ್' ವಿಧಾನ ಬಳಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ದಕ್ಷಿಣ ಮಹಾರಾಷ್ಟ್ರದಲ್ಲೇ ಮೊದಲ ಬಾರಿಗೆ ಅಶ್ವಿನಿ ಆಸ್ಪತ್ರೆಯ ಡಾ. ಆನಂದ ಕರವಾ ಅವರು ಸಂಧಿನೋವಿನಿಂದ ನರಳುತ್ತಿದ್ದ ಪಾಂಡುರಂಗ ಸೋನಿ ಅವರಿಗೆ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದರಲ್ಲಿ ಅರಿವಳಿಕೆ ತಜ್ಞ ಡಾ.ವಿದ್ಯಾನಂದ ಚವ್ಹಾಣ ಹಾಗೂ ತಂಡದ ಪಾತ್ರವೂ ಮಹತ್ವವಾಗಿತ್ತು. ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದ ತಜ್ಞರ ತಂಡ ಹಾಗೂ ಡಾ. ಆನಂದ ಕರವಾ, ಡಾ. ವಿದ್ಯಾನಂದ ಚವ್ಹಾಣ ಇವರನ್ನು ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ಬಿಪಿನ್ ಭಾಯಿ ಪಟೇಲ ಅಭಿನಂಧಿಸಿದ್ದಾರೆ.
ಇದೀಗ ಸಂಧಿನೋವು, ಸಮಸ್ಯೆಗಳ ಚಿಕಿತ್ಸೆಗಾಗಿ ಮುಂಬೈ, ಹೈದರಾಬಾದ್, ಬೆಂಗಳೂರು ಮುಂತಾದ ದೂರದ ಊಡುಗಳಿಗೆ ತೆರಳುವ ಅಗತ್ಯವಿಲ್ಲ, ಅಶ್ವಿನಿ ಆಸ್ಪತ್ರೆಯಲ್ಲಿ ರಿಯಾಯ್ತಿ ಬೆಲೆಯಲ್ಲಿ ಚಿಕಿತ್ಸೆ ಲಭಿಸುವುದರಿಂದ ಸಮಸ್ಯೆಯಿಂದ ಬಳಲುವವರು ಇಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಬಿಪಿನ್ ಭಾಯಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.