ರಾಯಚೂರು: ವಿವಿಧ ಬೆಳೆಗಳ ಮಾರಾಟ ಮತ್ತು ಉತ್ತಮ ಬೆಲೆ ಪಡೆಯಲು ಅನುಸರಿಸಬೇಕಾದ ಅಂಶಗಳಿಗೆ ಸಂಬಂಧಿಸಿದಂತೆ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತರಿಗೆ ಸಲಹೆ ಸೂಚನೆ ನೀಡಿದೆ. ರೈತರು ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ನಿಗದಿ ಸಮಯದೊಳಗೆ ಮಾರಾಟಕ್ಕಾಗಿ ತರಬೇಕು, ಉತ್ಪನ್ನಗಳನ್ನು ಸ್ವಚ್ಛಗೊಳಿಸಿ ಒಣಗಿಸಿ ವರ್ಗೀಕರಿಸಿ ಮಾರಾಟಕ್ಕೆ ತರಬೇಕು.
ರೈತರು ಸಭಾಂಗಣದಲ್ಲಿ ದಲ್ಲಾಳಿಗಳ ಮೂಲಕ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಸ್ಪರ್ಧಾತ್ಮಕ ಬೆಲೆ ಪಡೆಯಲು, ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದ ಹೊರಗಡೆ ಅನಧಿಕೃತ ವ್ಯಕ್ತಿಗಳ ಮೂಲಕ ಮಾರಾಟ ಮಾಡಬಾರದು. ಅನಧಿಕೃತ ವ್ಯಕ್ತಿಗಳ ಮೂಲಕ ಮಾರಾಟ ಮಾಡುವುದರಿಂದ ದರದಲ್ಲಿ, ತೂಕದಲ್ಲಿ ವ್ಯತ್ಯಾಸ, ಕಮಿಷನ್, ವಿಮೆ(ಇನ್ಸುರೆನ್ಸ್),ಸೂಟ್ ಇನ್ನಿತರ ಸಮಸ್ಯೆಗಳ ಎದುರಿಸಬೇಕಾಗುತ್ತದೆ.
ಮಾರಾಟ ಮಾಡಿದ ನಂತರ ಅಧಿಕೃತ ಪಟ್ಟಿ ಪಡೆಯಿರಿ ಬಿಳಿಹಾಳೆ ಪಟ್ಟಿ ತಿರಸ್ಕರಿಸಬೇಕು, ಹತ್ತಿ, ಅರಳೆಗೆ ನೀರು ಸಿಂಪರಣೆ ಮಾಡುವುದುರಿಂದ ಗುಣಮಟ್ಟ ಕಳೆದುಕೊಂಡು ಬೆಲೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಕೃಷಿ ಉತ್ಪನ್ನ ಮಾರಾಟ ಮಾಡಿದ ಮೇಲೆ ರೈತರಿಂದ ಕಮಿಷನ್, ಇನ್ಸೂರೆನ್ಸ್, ಸೂಟ್, ಸ್ಯಾಂಪಲ್ ಇನ್ನಿತರ ಕಡಿತಗಳಿಗೆ ಅವಕಾಶ ಇರುವುದಿಲ್ಲ. ಈ ಎಲ್ಲ ಅಂಶಗಳನ್ನು ಗಮನಿಸಿ ರೈತರಿಗೆ ತಕರಾರು ಬಂದಲ್ಲಿ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.