ADVERTISEMENT

ಕೇಂದ್ರ ಸರ್ಕಾರದ ದೌರ್ಜನ್ಯ ವಿರೋಧಿಸಿ ಬೈಕ್ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 6:10 IST
Last Updated 9 ಜೂನ್ 2011, 6:10 IST

ಲಿಂಗಸುಗೂರ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಯೋಗ ಗುರು ಬಾಬಾ ರಾಮ್‌ದೇವ್ ಗುರೂಜಿ ನಡೆಸುತ್ತಿದ್ದ ಶಾಂತಿಯುತ ಸತ್ಯಾಗ್ರಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ನಡೆಸಿರುವುದು ಖಂಡನೀಯ.

ಆರೋಗ್ಯ ಮತ್ತು ಸಾಮಾಜಿಕ ಜಾಗೃತಿ ಮೂಡಿಸು ಗುರೂಜಿ ಸಾರಥ್ಯದ ಸತ್ಯಾಗ್ರಹಿಗಳ ಮೇಲೆ ನಡೆಸುವ ದೌರ್ಜನ್ಯ ವಿರೋಧಿಸಿ ಬುಧವಾರ ಪತಂಜಲಿ ಯೋಗ ಸಂಸ್ಥೆ ಪಟ್ಟಣದಲ್ಲಿ ಮೋಟರ್‌ಬೈಕ್ ರ‌್ಯಾಲಿ ನಡೆಸಿತು.

ರಾಷ್ಟ್ರದ ಅಭಿವೃದ್ಧಿ, ಸಾಮಾಜಿಕ ಕಳಕಳಿ, ಭ್ರಷ್ಟಾಚಾರ ನಿಯಂತ್ರಣ, ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣ ವಾಪಸಾತಿ ಬೇಡಿಕೆ ಸೇರಿದಂತೆ ಇತರೆ ಹತ್ತಾರು ಬೇಡಿಕೆಗಳನ್ನಿಟ್ಟುಕೊಂಡು ಗುರೂಜಿ ಹೋರಾಟ ನಡೆಸುತ್ತಿರುವುದಕ್ಕೆ ತಮ್ಮದು ಸಂಪೂರ್ಣ ಬೆಂಬಲವಿದೆ. ರಾಷ್ಟ್ರ ಪ್ರೇಮ ಆಧರಿಸಿ ನಡೆಸುವ ಹೋರಾಟಗಾರರ ಹಕ್ಕನ್ನು ಧಮನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪು ಮಸಿ ಬಳೆದಂತಾಗಿದೆ ಎಂದು ಟೀಕಿಸಿದರು.

ರಾಮಲೀಲಾ ಮೈದಾನದಲ್ಲಿ ನಿದ್ರೆಗೆ ಜಾರಿದ್ದ ಮಹಿಳೆಯರು, ವಯೋವೃದ್ಧರ ಮೇಲೆ ಲಾಠಿ ಪ್ರಹಾರ ನಡೆಸುವ ಮೂಲಕ ತುರ್ತು ಪರಿಸ್ಥಿತಿಯ ಕರಾಳ ನೆನಪು ಮರುಕಳಿಸಿರುವುದು ದುರದೃಷ್ಟಕರ. ಸ್ವಸ್ತ ಸಮಾಜ ನಿರ್ಮಾಣ, ಭ್ರಷ್ಟಾಚಾರ ನಿರ್ಮೂಲನೆಯಂತಹ ವಿಚಾರವಾದಿಗಳನ್ನು ಹತ್ತಿಕ್ಕುವ ಯತ್ನ ಭಾರತೀಯರನ್ನು ತಲೆತಗ್ಗಿಸುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಕ್ಷಮೆಯಾಚಿಸಿ ಬಾಬಾ ಅವರ ಬೇಡಿಕೆ ಈಡೇರಿಸಬೇಕು ಎಂದು ರಾಷ್ಟ್ರಪತಿಗಳಿಗೆ ಬರೆದ ಮನವಿಯಲ್ಲಿ ಕೋರಿದ್ದಾರೆ.

ಪತಂಜಲಿ ಯೋಗ ಸಂಸ್ಥೆ ಅಧ್ಯಕ್ಷೆ ಲಕ್ಷ್ಮಿದೇವಿ ನಡುವಿನಮನಿ ರ‌್ಯಾಲಿ ನೇತೃತ್ವ ವಹಿಸಿದ್ದರು. ಡಾ. ಪಾಂಡುರಂಗ ಆಪ್ಟೆ, ಸಿದ್ದು ಬಡಿಗೇರ, ಕೆ.ಕೆ. ವಿಶ್ವನಾಥ, ಅಕ್ತರ್‌ಹುಸೇನ್, ಮಹಿಬೂಬಸಾಬ, ಗಂಗಾಧರ ಐದನಾಳ, ಸುಭಾಷ ಪಲ್ಲೇದ, ವಿಶ್ವನಾಥ ಆನ್ವರಿ, ಉಮೇಶ ಚನ್ನಿ, ಗುರು ಜನಾದ್ರಿ, ಮಲ್ಲಿಕಾರ್ಜುನ ಸಕ್ರಿ, ವಿಶ್ವನಾಥ ಗುತ್ತೆದಾರ, ಚೆನ್ನಬಸವ, ವೆಂಕಣ್ಣ ಕೊಂಪಾಲ, ಮಂಜುನಾಥ, ನಿತೀಶ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.