ADVERTISEMENT

‘ಕೋರ್ಟ್‌ನಲ್ಲಿರುವ ದೂರುಗಳ ಚರ್ಚೆಯಿಲ್ಲ’

ಜನಸ್ಪಂದನೆ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 9:04 IST
Last Updated 14 ಮಾರ್ಚ್ 2018, 9:04 IST

ರಾಯಚೂರು: ‘ಜನಸ್ಪಂದನ ಸಭೆಗೆ ಬರುವ ಸಾರ್ವಜನಿಕರು ತಮ್ಮ ದೂರುಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇದ್ದಾಗ ಅದನ್ನು ಜನಸಂಪರ್ಕ ಸಭೆಯಲ್ಲಿ ಚರ್ಚಿಸಲು ಬರುವುದಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾರ್ಡ್ ಸಂಖ್ಯೆ 34 ಅಸ್ಕಿಹಾಳ್‌ದಲ್ಲಿ ಜ್ಞಾನಜ್ಯೋತಿ ಶಾಲೆ ಹತ್ತಿರ ಮುಖ್ಯರಸ್ತೆಗೆ ಹೊಂದಿಕೊಂಡು ಬಾರ್‌ ತೆರೆಯುವುದಕ್ಕೆ ಅನುಮತಿ ನೀಡಿರುವುದನ್ನು ಬೈಪಾಸ್‌ ರಸ್ತೆಗೆ ಸ್ಥಳಾಂತರಿಸಬೇಕು ಎಂದು ಅಸ್ಕಿಹಾಳ ನಿವಾಸಿ ಎಂ.ವಸಂತಕುಮಾರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.

‘ಅಬಕಾರಿ ಕಾಯ್ದೆ ಪ್ರಕಾರ ಕಾನೂನು ಉಲ್ಲಂಘಿಸಿ ಬಾರ್‌ ತೆರೆದಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

ADVERTISEMENT

ರಾಯಚೂರು ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಅಧ್ಯಕ್ಷ ಎನ್.ಮಹಾವೀರ ದೂರು ಸಲ್ಲಿಸಿ, ‘ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವ ರೈತರಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಇತರೆ ಅಗತ್ಯ ಮೂಲ ಸೌಕಾರ್ಯ ಕಲ್ಪಿಸಲು ಪೌರಾಯುಕ್ತರಿಗೆ ಸೂಚಿಸಬೇಕು’ ಕೋರಿದರು. ‘ಪೌರಾ ಯುಕ್ತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಛಲವಾದಿ ಮಹಾಸಭಾ ಅಧ್ಯಕ್ಷ ರವೀಂದ್ರ ಪಟ್ಟಿ ದೂರು ಸಲ್ಲಿಸಿ ‘1992 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ. ಪುತ್ಥಳಿ ಪ್ರತಿಷ್ಠಾಪಿಸಿ 26 ವರ್ಷವಾಗಿದ್ದು. ವೃತ್ತದ ಸುತ್ತಮುತ್ತಲಿರುವ ಗ್ರೀಲ್, ಹೈಮಾಸ್ ದೀಪ ಕಂಬಗಳು ತುಕ್ಕು ಹಿಡಿದಿವೆ. ಇವುಗಳನ್ನು ಬದಲಾಯಿಸುವಂತೆ ಅನೇಕ ಸಭೆಯಲ್ಲಿ ತಮ್ಮ ಗಮನ ಸೆಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ಶೀಘ್ರವೇ ಅಂಬೇಡ್ಕರ್ ವೃತ್ತವನ್ನು ನವೀಕರಿಸಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು’ ಎಂದು ಕೋರಿದರು.

ಆದಷ್ಟು ಶೀಘ್ರ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.